ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೊಮ್ಮೆ ಜಾತಿ ಸಮೀಕ್ಷೆ ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿರುವುದು ರಾಜ್ಯಸರ್ಕಾರದ ಸೋಲು, ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.
ರಾಜ್ಯಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ, ಪ್ರಾಮಾಣಿಕತೆ ಇದ್ದರೆ ಸಮೀಕ್ಷೆ ಹೇಗಿರಬೇಕು ಎನ್ನುವ ಕುರಿತು ಸಾರ್ವಜನಿಕ ಚರ್ಚೆ ನಡೆಸಬೇಕು. ಜೊತೆಗೆ ಸರ್ವಪಕ್ಷಗಳ ಸಭೆ ಕರೆದು ಎಲ್ಲರ ಅಭಿಪ್ರಾಯ ಆಲಿಸಿ, ಸಮಗ್ರವಾಗಿ ಸಿದ್ಧತೆಗಳನ್ನು ಮಾಡಿಕೊಂಡು ಈ ಶೈಕ್ಷಣಿಕ ವರ್ಷ ಮುಗಿದ ಬಳಿಕವಷ್ಟೇ ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆ ನಡೆಸಬೇಕು. ಇದು ರಾಜ್ಯದ ಹಿತದೃಷ್ಟಿಯಿಂದ ಅತ್ಯವಶ್ಯ ಎಂದರು.
ಜಾತಿ ಸಮೀಕ್ಷೆ ವರದಿಯನ್ನು ಬಿಜೆಪಿ ಸೇರಿದಂತೆ ಮಠಾಧೀಶರು, ಹಲವು ಸಮುದಾಯಗಳ ಮುಖಂಡರು, ಸಾರ್ವಜನಿಕರು ತೀವ್ರವಾಗಿ ವಿರೋಧಿಸಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಜಾರಿ ಮಾಡಲು ಮುಂದಾಗಿದ್ದರು . ಅದಕ್ಕೆ ಅವರ ಪಕ್ಷದ ಹೈಕಮಾಂಡ್ ಸೂಚನೆ ನೀಡಿದ ಬಳಿಕ ಮರು ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ. 90 ದಿನಗಳ ಕಾಲಮಿತಿಯೊಳಗೆ ಸಮೀಕ್ಷೆಯ ವರದಿ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಸರಿಯಲ್ಲ. ಈಗಾಗಲೇ ಶಾಲೆಗಳು ಆರಂಭವಾಗಿವೆ. ಇಂತಹ ಬೃಹತ್ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿದರೆ, ಶೈಕ್ಷಣಿಕ ಚಟುವಟಿಕೆಗಳ ಮೇಲೆ ಹಾಗೂ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು. ಆನ್ ಲೈನ್ ಮೂಲಕ ಸಮೀಕ್ಷೆ ನಡೆಸುವ ಚಿಂತನೆ ಸರಿಯಲ್ಲ. ಅನೇಕ ಅಕ್ಷರಸ್ಥರೇ ಇಂದಿಗೂ ಆನ್ ಲೈನ್ ವ್ಯವಸ್ಥೆಯಿಂದ ದೂರವಿರುವಾಗ ಇಂತಹ ಸಮೀಕ್ಷೆಯಿಂದ ನಿಖರತೆ ಮತ್ತು ಗುರುತು ಪತ್ತೆ ಸಾಧ್ಯವಿಲ್ಲ . ಈ ಮುಂಚೆ ಸಮೀಕ್ಷೆಗಾಗಿ ಬಳಸಿದ್ದ 160 ಕೋಟಿ ರೂಪಾಯಿ ವ್ಯರ್ಥವಾಗಿದ್ದು, ಮರುಸಮೀಕ್ಷೆ ನಡೆಸಲು ಹಣವಿಲ್ಲ. ಈ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದ್ದಾರೆ.