ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ನಿತ್ಯ ಒಂದು ಟಿಎಂಸಿ ಕಾವೇರಿ ನದಿಯಿಂದ ನೀರು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ನಿರಾಕರಿಸಿದ್ದು, ಪ್ರತಿನಿತ್ಯ 8 ಕ್ಯುಸೆಕ್ ನೀರು ಹರಿಸಲು ತೀರ್ಮಾನ ಕೈಗೊಂಡ ಮರುದಿನವೇ ತಮಿಳುನಾಡು ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ.
ನಾಳೆ (ಮಂಗಳವಾರ) ಚೆನ್ನೈನಲ್ಲಿ ಜಲಸಂಪನ್ಮೂಲ ಸಚಿವ ದೊರೈಮುರುಗನ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದ ಕರ್ನಾಟಕ ಸರ್ಕಾರ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಶಿಫಾರಸ್ಸು ಅನ್ವಯ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡದಿರಲು ತಿರ್ಮಾನಿಸಿತ್ತು. ಜುಲೈ 31ರ ವರೆಗೆ ನಿತ್ಯ 8 ಕ್ಯುಸೆಕ್ ನೀರು ಹರಿಸಲು, ಮಳೆ ಕಡಿಮೆಯಾದ್ರೆ, ಅದಕ್ಕಿಂತಲೂ ಕಡಿಮೆ ನೀರು ಹರಿಸಲು ತೀರ್ಮಾನಿಸಿತ್ತು. ಜೊತೆಗೆ ಅಲ್ಲದೇ ಮಳೆಯ ಪ್ರಮಾಣ ನಿರೀಕ್ಷೆಗಿಂತ ಸರಿ ಸುಮಾರು 28% ಕೊರತೆ ಇದ್ದು ಈವರೆಗಿನ ಮಳೆಗೆ ಜಲಾಶಯಗಳು ಕೂಡಾ ಭರ್ತಿಯಾಗಿಲ್ಲ. ಹವಾಮಾನ ಇಲಾಖೆ ಮಳೆಯ ಭರವಸೆ ನೀಡಿದ್ದರೂ ಗ್ಯಾರಂಟಿ ಇಲ್ಲ ಹೀಗಾಗೀ ಜುಲೈ ಅಂತ್ಯದವರೆಗೂ 1 ಟಿಎಂಸಿ ನೀರು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಲು ನಿರ್ಧರಿಸಿದೆ.
ರಾಜ್ಯ ಸರ್ಕಾರದ ಈ ತಿರ್ಮಾನದ ಬೆನ್ನಲ್ಲೇ ಈಗ ತಮಿಳುನಾಡಿನ ಪಕ್ಷಗಳ ಸಭೆಯನ್ನು ಸಚಿವ ದೊರೈಮುರುಗನ್ ಕರೆದಿದ್ದು, ಒತ್ತಡ ಹೆಚ್ಚಿಸುವ ಪ್ರಯತ್ನ ಆರಂಭಿಸಿದೆ.