ಹೊಸದಿಗಂತ ವರದಿ,ಮೈಸೂರು:
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ತಕ್ಷಣವೇ ಶೇ. ೩೩ ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಒತ್ತಾಯಿಸಿದರು.
ಬುಧವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ಜಾರಿ ಮಾಡುತ್ತೇವೆ ಅಂತ ಹೇಳಿ ಇನ್ನೂ ಮೀನಾಮೇಷ ಎಣಿಸುತ್ತಿದೆ. ಈಗ ಜಾರಿ ಮಾಡಿದರೆ ನನ್ನಂತಹ ಎಷ್ಟೋ ಮಹಿಳೆಯರಿಗೆ ಅನುಕೂಲವಾಗುತಿತ್ತು ಎಂದರು.
ಈಗ ನಾನು ಕಾಂಗ್ರೆಸ್ ಪಕ್ಷದಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ನಾವು ಸ್ಪರ್ಧೆ ಮಾಡುವುದಕ್ಕೆ ಆಗುತ್ತಿಲ್ಲ. ಈಗ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಜಿಲ್ಲಾ ಪಂಚಾಯಿತಿ ಎಲ್ಲಾ ಕಡೆ ಮಹಿಳೆಯರಿಗೆ ಒಂದಷ್ಟು ಮೀಸಲಾತಿ ಇರುವುದರಿಂದ, ನಮ್ಮಂತ ಮಹಿಳೆಯರಿಗೆ ಅಧಿಕಾರ ದಕ್ಕಿದೆ. ಲೋಕಸಭೆಯಲ್ಲೂ ಆ ಕೆಲಸ ಆಗಬೇಕು. ಹೀಗಾಗಿ ಕೇಂದ್ರ ಸರ್ಕಾರ ಆದಷ್ಟು ಬೇಗ ಶೇ. ೩೩ ರಷ್ಟು ಮಹಿಳಾ ಮೀಸಲಾತಿ ತರಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದಿಂದ ಭಾರತ್ ಬ್ರಾಂಡ್ ಅಕ್ಕಿ ಕೊಡೋದು ಸರಿ. ಆದರೆ ಅದನ್ನ ಉಚಿತವಾಗಿ ಕೊಡಬೇಕಿತ್ತು. ಅಕ್ಕಿ ಮಾರಾಟ ಮಾಡುವ ಮೂಲಕ ಜನರ ಅಕ್ಕಿಲೂ ಬಿಜೆಪಿ ವ್ಯಾಪಾರ ಶುರು ಮಾಡಿದೆ. ನಮ್ಮ ರಾಜ್ಯ ಸರ್ಕಾರ ಹಣ ಕೊಟ್ಟು ಅಕ್ಕಿ ಕೇಳಿದ್ರೆ ಕೊಡಲಿಲ್ಲ. ಈಗ ಬಿಜೆಪಿಯವರು ಅಕ್ಕಿ ಮಾರಾಟ ಶುರು ಮಾಡಿದ್ದಾರೆ. ಇದು ಆಘಾತಕಾರಿ ವಿಚಾರ. ನಾವು ಕೇಳಿದಾಗ ಅಕ್ಕಿ ಕೊಡದೇ ಈಗ ೨೯ ರೂ. ಗೆ ಮಾರಾಟ ಮಾಡಲು ಹೋಗಿದ್ದಾರೆ. ಮುಂದೊoದು ದಿನ ಎಲ್ಲವನ್ನೂ ಮಾರಿ ಬಿಡ್ತಾರೆ. ಜನ ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ತಿಳಿಸಿದರು.