ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಚುನಾವಣಾ ಕಣ ರಂಗೇರಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದು, ದೀದಿ ಕೋಟೆಯಲ್ಲಿ ಬಿಜೆಪಿಯ ಗೆಲುವಿಗಾಗಿ ದೃಢ ಸಂಕಲ್ಪ ಮಾಡಿದ್ದಾರೆ.
ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಂದು ಭಾಗದಲ್ಲಿರುವ ಅಕ್ರಮ ನುಸುಳುಕೋರರನ್ನು ಹೊರಹಾಕುತ್ತೇವೆ. ಈ ಮೂಲಕ ನುಸುಳುಕೋರ ಮುಕ್ತ ರಾಜ್ಯ ನಿರ್ಮಾಣದ ಗುರಿ ನಮ್ಮದು ಎಂದು ಭರವಸೆ ನೀಡಿದರು.
ಬಂಗಾಳದ ದೀದಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಂದು ಅನೇಕ ಯುವಕರಿಗೆ ಉದ್ಯೋಗ ಮರೀಚಿಕೆಯಾಗಿದ್ದು, ನಾವು ಪ್ರತಿ ವರ್ಷ ಕನಿಷ್ಠ 1 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಯುವಜನತೆಯ ಜೇವನಕ್ಕೆ ದಾರಿ ದೀಪವಾಗುತ್ತೇವೆ. ಜೊತೆಗೆ ಇಲ್ಲಿನ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಖಾಸಗಿ ವಲಯದಲ್ಲೂ ಉದ್ಯೋಗದ ಅವಕಾಶಗಳನ್ನು ಮಾಡಿ ಕೊಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಾಫಿಯಾ ಸಂಸ್ಕೃತಿ ಹೆಚ್ಚುತ್ತಿದ್ದು, ಶೀಘ್ರದಲ್ಲೇ ರಾಜಕೀಯ ಹಿಂಸಾಚಾರ ಹಾಗೂ ಮಾಫಿಯಾ ಸಂಸ್ಕೃತಿಯನ್ನು ಕಿತ್ತುಹಾಕುತ್ತೇವೆ. ಮುಕ್ತವಾಗಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಬಂಗಾಳ ಜನತೆಗೆ ನೆಮ್ಮದಿಯ ನಾಡನ್ನು ನಿರ್ಮಿಸುತ್ತೇವೆ ಎಂದು ಹೇಳಿದರು.



