ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಪವಿತ್ರ ಅಮರನಾಥ ಗುಹೆಯತ್ತ ಸಾಗುವ ವಾರ್ಷಿಕ ತೀರ್ಥಯಾತ್ರೆಗೆ ಇಂದು ಭಾನುವಾರ ಮುಂಜಾನೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲ ದಿನವೇ ಅಮೆರಿಕ, ಉಕ್ರೇನ್ ಸೇರಿದಂತೆ ವಿವಿಧ ದೇಶಗಳ 87 ವಿದೇಶಿ ಪ್ರಜೆಗಳು ಒಳಗೊಂಡಂತೆ ಒಟ್ಟು 6,000ಕ್ಕೂ ಹೆಚ್ಚು ಶಿವಭಕ್ತರ ಮೊದಲ ತಂಡವು ಜಮ್ಮುವಿನ ಬೇಸ್ ಕ್ಯಾಂಪ್ನಿಂದ ಬಾಬಾ ಬರ್ಫಾನಿ ದರುಶನಕ್ಕಾಗಿಗ ಜಯಘೋಷಗಳೊಂದಿಗೆ ಪ್ರಯಾಣ ಆರಂಭಿಸಿದೆ.
ಯಾತ್ರಿಕರ ಸುರಕ್ಷತೆಗಾಗಿ ಜಮ್ಮು-ಕಾಶ್ಮೀರದಾದ್ಯಂತ ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ಸ್ಥಳೀಯ ಪೊಲೀಸರಿಂದ ಅಭೂತಪೂರ್ವ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.
ವಿದೇಶಿ ಭಕ್ತರ ಸಂಭ್ರಮ:
ಈ ಬಾರಿಯ ಯಾತ್ರೆಯ ಮೊದಲ ತಂಡದಲ್ಲೇ ಉಕ್ರೇನ್, ಅಮೆರಿಕ ಮತ್ತು ಮಲೇಷಿಯಾ ಸೇರಿದಂತೆ ವಿವಿಧ ದೇಶಗಳ 87 ವಿದೇಶಿ ಪ್ರಜೆಗಳು ಭಾಗವಹಿಸಿ ಸನಾತನ ಆಧ್ಯಾತ್ಮಿಕ ಸಂಸ್ಕೃತಿಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಕ್ತರ ತಂಡಗಳು ಸಾಂಪ್ರದಾಯಿಕ ಹಾಗೂ ಉದ್ದದ ಮಾರ್ಗವಾದ ಪಹಲ್ಗಾಮ್ ಮತ್ತು ಕಡಿದಾದ ಆದರೆ ಸಣ್ಣ ಮಾರ್ಗವಾದ ಬಾಲ್ಟಾಲ್ ಮೂಲಕ ಪವಿತ್ರ ಗುಹೆಯತ್ತ ಹೆಜ್ಜೆ ಇಡುತ್ತಿದ್ದಾರೆ.
ಎತ್ತರದ ಪ್ರದೇಶದಲ್ಲಿ ಆಮ್ಲಜನಕದ ಕೊರತೆ ಎದುರಿಸಲು ಹಾದಿಯುದ್ದಕ್ಕೂ ಆಮ್ಲಜನಕ ಬೂತ್ಗಳು, ವೈದ್ಯಕೀಯ ಶಿಬಿರಗಳು ಮತ್ತು ಉಚಿತ ಆಹಾರದ (ಲಂಗರ್) ವ್ಯವಸ್ಥೆಯನ್ನು ಶ್ರೀ ಅಮರನಾಥಜಿ ಪುಣ್ಯಕ್ಷೇತ್ರ ಮಂಡಳಿ ಸಿದ್ಧಪಡಿಸಿದೆ.
ಇದನ್ನೂ ಓದಿ:
ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ
ಅಮರನಾಥ ಯಾತ್ರೆ ಆರಂಭವಾದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಭಕ್ತಾಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಬಾಬಾ ಬರ್ಫಾನಿಯ ಆಶೀರ್ವಾದದಿಂದ ಎಲ್ಲಾ ಭಕ್ತರ ಪ್ರಯಾಣವು ಸುಖಕರ ಮತ್ತು ಸುರಕ್ಷಿತವಾಗಿರಲಿ ಹಾಗೂ ದೇಶದಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಪ್ರಧಾನಿ ಕೋರಿದ್ದಾರೆ.



