ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿನ ಅವ್ಯವಸ್ಥೆ ಕುರಿತು ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಸೂಕ್ತ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ನವೆಂಬರ್ನಿಂದ ಜನವರಿವರೆಗೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ವಿವಿಧ ರಾಜ್ಯಗಳಿಂದ ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಆದರೆ ಯಾತ್ರಾರ್ಥಿಗಳು ಅಲ್ಲಿಗೆ ಹೋಗುವಾಗ ಸಮಸ್ಯೆ ಎದುರಿಸಬೇಕಾಗುತ್ತದೆ. ಇದನ್ನು ಪರಿಹರಿಸುವಂತೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಕೇರಳ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ಅಯ್ಯಪ್ಪ ದೇವರ ದರ್ಶನಕ್ಕಾಗಿ ಪ್ರತಿ ವರ್ಷ ಸುಮಾರು 1 ಕೋಟಿ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ ಎಂಬುದು ನಿಮಗೆ ತಿಳಿದಿರಬೇಕು. ತೆಲುಗು ಮಾತನಾಡುವ ರಾಜ್ಯಗಳಾದ ತೆಲಂಗಾಣ (ನನ್ನ ರಾಜ್ಯ) ಮತ್ತು ಆಂಧ್ರಪ್ರದೇಶದಿಂದ 15 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಆದರೆ ವಿವಿಧ ಸುದ್ದಿಗಳ ಪ್ರಕಾರ, ಅಯ್ಯಪ್ಪ ಭಕ್ತರ ಶಬರಿಮಲೆ ದರ್ಶನಕ್ಕೆ ತೊಂದರೆಯಾಗುತ್ತಿದೆ ಮತ್ತು ಸನ್ನಿಧಾನಕ್ಕೆ ಹೋಗಲು ಭಕ್ತರು ಬಹಳ ಸಮಯ ಕಾಯಬೇಕಾಗಿದೆ ಎಂದು ತಿಳಿಯುತ್ತಿದೆ. ಇತ್ತೀಚೆಗೆ ಬಾಲಕಿಯ ಸಾವು ಕೂಡ ಸಂಭವಿಸಿದೆ’ ಎಂದು ಪಿಣರಾಯಿ ವಿಜಯನ್ಗೆ ಬರೆದ ಪತ್ರದಲ್ಲಿ ಕಿಶನ್ ರೆಡ್ಡಿ ಉಲ್ಲೇಖಿಸಿದ್ದಾರೆ.
ದೇಗುಲದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು. ಇದರಿಂದ ಭಕ್ತರು ಹೆಚ್ಚು ಸಮಯ ಕಾಯುವುದನ್ನು ತಪ್ಪಿಸಬಹುದು. ಇದಲ್ಲದೆ ಭಕ್ತರಿಗೆ ಆಹಾರ, ನೀರು, ಶುದ್ಧ ನೈರ್ಮಲ್ಯ ಪರಿಸರ ವ್ಯವಸ್ಥೆ, ವೈದ್ಯಕೀಯ ನೆರವು ಸಿಗುವಂತೆ ವ್ಯವಸ್ಥೆ ಮಾಡಿ. ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಸುರಕ್ಷಿತ ಮಾರ್ಗಗಳನ್ನು ನಿರ್ಮಿಸಿ ಭಕ್ತರು ಸುರಕ್ಷಿತವಾಗಿ ತೆರಳುವಂತೆ ಮಾಡಬೇಕು ಎಂದು ಕೇಂದ್ರ ಸಚಿವರು ಪತ್ರದಲ್ಲಿ ಮನವಿ ಮಾಡಿದ್ದಾರೆ.