ಹೊಸದಿಗಂತ ಕುಮಟಾ:
ಜನರಿಗೆ ನೌಕರಿ ಕೊಡಿಸುವುದಾಗಿ ನಂಬಿಸಿ, ಅವರಿಂದ ಹಣ ಪಡೆದು ಮಗ ಮೋಸ ಮಾಡಿದ್ದನ್ನು ಸಹಿಸಲಾಗದೇ, ತಂದೆಯೊಬ್ಬ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಬಾವಿಯ ಹಗ್ಗವನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ತಾಲೂಕಿನ ಚಿತ್ರಗಿಯ ಅಳ್ವೆದಂಡೆಯಲ್ಲಿ ನಡೆದಿದೆ.
ಚಿತ್ರಗಿಯ ಅಳ್ವೆದಂಡೆಯ ನಿವಾಸಿ ನಾಗೇಶ ಗುನಗೇರಿ ನಾಯ್ಕ (64) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ತಮ್ಮ ಮಗನಾದ ರಮಾಕಾಂತ ನಾಯ್ಕ ಜನರಿಗೆ ನೌಕರಿ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡಿದ ಬಗ್ಗೆ 2021 ರಲ್ಲಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನ್ನ ಮಗ ಹೀಗೆ ಜನರಿಗೆ ಮೋಸ ಮಾಡಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಾ ಇದ್ದವರು, ಮಗ ಮಾಡಿದ ಕೃತ್ಯವನ್ನು ಮತ್ತು ಇನ್ನಿತರ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಬಾಡಿಗೆ ಮನೆಯ ಹೊರಗೆ ಇದ್ದ ಬಾವಿಯ ನೀರು ಸೇದುವ ಹಗ್ಗವನ್ನು ಕುತ್ತಿಗೆಗೆ ಕಟ್ಟಿಕೊಂಡು ಬಾವಿಯಲ್ಲಿ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನಾಗೇಶ ಅವರ ಪತ್ನಿ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.