ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರವಾಸದಿಂದ ಯಶಸ್ವಿಯಾಗಿ ಮರಳಿದ ಬೆನ್ನಲ್ಲೇ ದೇಶದ ಮಕ್ಕಳಲ್ಲಿ ಬಾಹ್ಯಾಕಾಶದತ್ತ ಹೊಸ ಕುತೂಹಲ ಮೂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರು ಭಾನುವಾರ ಮಾಸಿಕ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಹಂಚಿಕೊಂಡರು.
ಶುಭಾಂಶು ಶುಕ್ಲಾ ಭೂಮಿಗೆ ಸುರಕ್ಷಿತವಾಗಿ ಮರಳಿದ ಕುರಿತು ದೇಶಾದ್ಯಂತ ಸಂತೋಷದ ಅಲೆ ಎದ್ದಿದ್ದು, ಪ್ರತಿ ಹೃದಯದಲ್ಲೂ ಹೆಮ್ಮೆ ಹಾಗೂ ಉಲ್ಲಾಸದ ಭಾವನೆ ಮೂಡಿರುವುದಾಗಿ ಮೋದಿ ಹೇಳಿದರು. ಇಡೀ ದೇಶವೇ ಈ ಸಾಧನೆಗೆ ಸಾಕ್ಷಿಯಾಗಿದ್ದು, ಮಕ್ಕಳಲ್ಲಿ ವಿಶೇಷವಾಗಿ ಬಾಹ್ಯಾಕಾಶ ಕ್ಷೇತ್ರದ ಕುರಿತ ಆಸಕ್ತಿ ಹೆಚ್ಚುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದರು.
ಪ್ರಧಾನಿ ಮೋದಿ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಇನ್ನೊಂದು ಪ್ರಮುಖ ಮುನ್ನಡೆಯನ್ನೂ ವಿವರಿಸಿದರು. “ಐದು ವರ್ಷಗಳ ಹಿಂದಷ್ಟೇ ದೇಶದಲ್ಲಿ 50ಕ್ಕಿಂತ ಕಡಿಮೆ ಬಾಹ್ಯಾಕಾಶ ಸ್ಟಾರ್ಟಪ್ಗಳು ಇದ್ದವು. ಆದರೆ ಇಂದು ಅವರ ಸಂಖ್ಯೆ 200ಕ್ಕಿಂತ ಹೆಚ್ಚಾಗಿದೆ. ಇದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯ ಸ್ಪಷ್ಟ ಸಂಕೇತವಾಗಿದೆ” ಎಂದು ಹೇಳಿದರು.
ಆಗಸ್ಟ್ 23ರಂದು ರಾಷ್ಟ್ರ ಬಾಹ್ಯಾಕಾಶ ದಿನವನ್ನು ಆಚರಿಸಲು ತೀರ್ಮಾನಿಸಿರುವ ಕೇಂದ್ರ ಸರ್ಕಾರ, ಈ ದಿನವನ್ನು ಇನ್ನಷ್ಟು ಸಮರ್ಥ ರೀತಿಯಲ್ಲಿ ಆಚರಿಸುವ ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. “ಇದು ಮಕ್ಕಳಿಗೆ ಹಾಗೂ ಯುವಜನತೆಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಕಡೆಗೆ ಹೆಜ್ಜೆ ಇಡುವ ಉತ್ತಮ ಅವಕಾಶ” ಎಂದು ಪ್ರಧಾನಿ ಹೇಳಿದರು.