ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರಿನ ಗೊಳೂರು ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯ ಬಾಲಕಿ ಕೈ ಬೆರಳು ತುಂಡಾಗಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಸಾಲಿನಲ್ಲಿ ನಿಂತಿದ್ದ ವೇಳೆ ಬಾಲಕಿ ಕೈ ಬಾಗಿಲಿಗೆ ಸಿಲುಕಿದೆ. ಚಿನ್ಮಯಿದೇವಿ ಎಂಬ ವಿದ್ಯಾರ್ಥಿನಿ ಎಲ್ಲ ಮಕ್ಕಳಂತೆ ಊಟಕ್ಕೆ ಲೈನ್ನಲ್ಲಿ ನಿಂತಿದ್ದಾಳೆ.
ಬಾಗಿಲಿಗೆ ಕೈ ಇಟ್ಟುಕೊಂಡು ಆಕೆ ನಿಂತಿದ್ದಳು, ಮೂರನೇ ತರಗತಿ ಬಾಲಕಿಗೆ ಆಕೆ ಕೈ ಇಟ್ಟಿದ್ದು ಗೊತ್ತಿರಲಿಲ್ಲ. ಮಿಸ್ ಆಗಿ ಬಾಗಿಲನ್ನು ತಳ್ಳಿದ್ದಾಳೆ. ಇದರಿಂದಾಗಿ ಚಿನ್ಮಯಿದೇವಿಯ ಎರಡು ಬೆರಳುಗಳು ತುಂಡಾಗಿವೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳನ್ನು ಶಾಲೆಗೆ ಕಳಿಸಿದಾಗ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ. ಮಗಳ ಬೆರಳು ಕಟ್ ಆಗಿ ರಕ್ತ ಸೋರುತ್ತಿದ್ದರೂ ತಕ್ಷಣ ಆಸ್ಪತ್ರೆಗೆ ಸೇರಿಸದೇ, ಪ್ರಥಮ ಚಿಕಿತ್ಸೆ ನೀಡದೇ ನಮಗೆ ಕರೆ ಮಾಡಿ, ನಾವು ಬರುವವರೆಗೂ ಕಾದಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಇಷ್ಟೇ ಅಲ್ಲದೆ ಮಗುವಿನ ಬೆರಳುಗಳನ್ನು ಶಾಲೆಯ ಸಿಬ್ಬಂದಿ ಕಸದಲ್ಲಿ ಗುಡಿಸಿ ಎಸೆದಿದ್ದಾರೆ. ಹೀಗಾಗಿ ಮಗುವಿಗೆ ಎರಡು ಬೆರಳೇ ಇಲ್ಲದಂತಾಗಿದೆ. ತುಂಡಾಗಿದ್ದ ಬೆರಳುಗಳನ್ನು ತಕ್ಷಣವೇ ತಂದಿದ್ರೆ ಅದನ್ನು ಜೋಡಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ.
ಬಿಸಿಯೂಟದ ಸಮಯದಲ್ಲಿ ಯಾವ ಶಿಕ್ಷಕರೂ ಇರಲಿಲ್ಲವಾ? ಯಾರಾದರೂ ಮಕ್ಕಳ ಕಡೆ ಗಮನ ಹರಿಸಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಮಗುವಿನ ಭವಿಷ್ಯಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.



