ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರೈಸ್ತ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕ್ರಿಸ್ಮಸ್ ಅನ್ನು ಇಂದು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಸಂತಸ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕ್ರಿಸ್ಮಸ್ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಪ್ರೀತಿ, ಕರುಣೆ, ಶಾಂತಿ ಮತ್ತು ಮಾನವೀಯತೆಯ ಸಂಕೇತವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಎಲ್ಲೆಡೆ ಚರ್ಚ್ಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಪ್ರತಿ ವರ್ಷ ಡಿಸೆಂಬರ್ 25ರಂದು ಯೇಸುಕ್ರಿಸ್ತನ ಜನ್ಮದಿನದ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಹಬ್ಬವು ಭರವಸೆ, ಶಾಂತಿ, ಕ್ಷಮೆ ಮತ್ತು ಪ್ರೀತಿಯ ವಿಚಾರಗಳೊಂದಿಗೆ ಸಂಬಂಧ ಹೊಂದಿದೆ. ಇದು ಕ್ರಿಶ್ಚಿಯನ್ ಧಾರ್ಮಿಕ ಹಬ್ಬವಾಗಿದ್ದರೂ, ಅದರ ಸಾರ್ವತ್ರಿಕ ಸಂದೇಶದಿಂದ ವೈವಿಧ್ಯಮಯ ಹಿನ್ನೆಲೆಯ ಜನರೂ ಸಹ ಜಾಗತಿಕವಾಗಿ ಆಚರಣೆ ಮಾಡುತ್ತಾರೆ.
ಹಬ್ಬದ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಇಂದು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ರಾಷ್ಟ್ರಪತಿ ಮುರ್ಮು ಅವರು ತಮ್ಮ ಎಕ್ಸ್ ಸಂದೇಶದಲ್ಲಿ, ಯೇಸುಕ್ರಿಸ್ತ ತೋರಿಸಿದ ಮಾರ್ಗದ ಅನುಸರಣೆಗೆ, ದಯೆ ಮತ್ತು ಪರಸ್ಪರ ಸಾಮರಸ್ಯವನ್ನು ಉತ್ತೇಜಿಸುವ ಸಮಾಜ ನಿರ್ಮಿಸುವಂತೆ ಕರೆ ನೀಡಿದ್ದಾರೆ.
ಕ್ರಿಸ್ಮಸ್ನ ಈ ಶುಭ ಸಂದರ್ಭದಲ್ಲಿ, ನಾನು ದೇಶದ ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯದ ಸಹೋದರ, ಸಹೋದರಿಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ಸಂತೋಷ ಮತ್ತು ಉತ್ಸಾಹದ ಹಬ್ಬವಾದ ಕ್ರಿಸ್ಮಸ್, ಪ್ರೀತಿ ಮತ್ತು ಕರುಣೆಯ ಸಂದೇಶ ಸಾರುತ್ತದೆ. ಹಬ್ಬವು ಮಾನವಕುಲದ ಕಲ್ಯಾಣಕ್ಕಾಗಿ ಭಗವಂತ ಯೇಸುಕ್ರಿಸ್ತನು ಮಾಡಿದ ತ್ಯಾಗದ ಪ್ರತೀಕವಾಗಿದೆ. ಈ ಪವಿತ್ರ ಸಂದರ್ಭವು ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಮಾನತೆ ಮತ್ತು ಸೇವೆಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.

