ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟರಿಗಿಂತ ಹೆಚ್ಚು ಅವರ ಅಭಿಮಾನಿಗಳ ನಡುವಿನ ಸಂಘರ್ಷವೇ ಸುದ್ದಿಯಾಗಿದೆ. ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಅಸಮಾಧಾನ, ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಚಿತ್ರದ ಪ್ರಚಾರ ಕಾರ್ಯಕ್ರಮದ ಬಳಿಕ ಮತ್ತಷ್ಟು ತೀವ್ರಗೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆರೋಪ–ಪ್ರತ್ಯಾರೋಪಗಳು ಹೆಚ್ಚಾಗಿ, ಸ್ಟಾರ್ ವಾರ್ ಎಂಬ ಪದವೇ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ನಟ ಡಾಲಿ ಧನಂಜಯ್, ಅಭಿಮಾನಿಗಳಿಗೆ ಶಾಂತಿಯ ಕಿವಿಮಾತು ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, “ಅಭಿಮಾನಿಗಳಿಗೆ ತಮ್ಮದೇ ಬದುಕು, ಕುಟುಂಬ, ಜವಾಬ್ದಾರಿಗಳಿವೆ. ಅವನ್ನೆಲ್ಲ ಮರೆತು ಹೊಡೆದಾಟಕ್ಕೆ ಇಳಿಯುವುದು ಬೇಡ. ಈ ಜಗಳಕ್ಕೆ ವಿರಾಮ ನೀಡಿ. ಎಲ್ಲ ಕನ್ನಡ ಸಿನಿಮಾಗಳನ್ನೂ ಮನಸಾರೆ ನೋಡಿ, ಖುಷಿಪಡಿ” ಎಂದು ಮನವಿ ಮಾಡಿದರು.
ಇದನ್ನೂ ಓದಿ:
ಇಷ್ಟವಾದ ಸಿನಿಮಾವನ್ನು ಮೆಚ್ಚುವುದು ಸಹಜ, ಆದರೆ ಇಷ್ಟವಾಗದಿದ್ದರೆ ಸಕಾರಾತ್ಮಕವಾಗಿ ಹೇಳಿ ಎಂದು ಡಾಲಿ ಸಲಹೆ ನೀಡಿದರು. ಅಭಿಮಾನಿಗಳ ಸೌಹಾರ್ದವೇ ನಟರಿಗೆ ದೊಡ್ಡ ಶಕ್ತಿ ಎಂದು ಅವರು ಹೇಳಿದರು. ಜೊತೆಗೆ ನಾಡು–ನುಡಿ ವಿಚಾರಕ್ಕೂ ಸ್ಪಷ್ಟ ನಿಲುವು ವ್ಯಕ್ತಪಡಿಸಿದ ಡಾಲಿ, “ನಮ್ಮ ಭಾಷೆ ಮತ್ತು ನಾಡೇ ನಮ್ಮ ಅಸ್ತಿತ್ವ. ಈ ವಿಚಾರದಲ್ಲಿ ನಾವು ಒಗ್ಗಟ್ಟಾಗಿ ನಿಲ್ಲಬೇಕು” ಎಂದರು.

