ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್, ಕಾಲಿವುಡ್ ಸೇರಿದಂತೆ ಭಾರತದ ಎಲ್ಲ ಭಾಷೆಗಳ ಚಿತ್ರರಂಗಕ್ಕೆ ಕರ್ನಾಟಕ, ಅದರಲ್ಲೂ ಬೆಂಗಳೂರು ಪ್ರಮುಖ ಕಲೆಕ್ಷನ್ ಕೇಂದ್ರವಾಗಿದ್ದು, ಕಳೆದ ಕೆಲವರ್ಷಗಳಿಂದ ಇಲ್ಲಿ ಪ್ರತಿ ಸಿನಿಮಾ ಭರ್ಜರಿ ಹಿಟ್ ಆಗುತ್ತಿದೆ. ಆದರೆ ಇದುವರೆಗೆ ಯಾವುದೇ ನಿಯಂತ್ರಣವಿಲ್ಲದ ಟಿಕೆಟ್ ದರದ ಮೇಲೆ ಇದೀಗ ಸರ್ಕಾರದಿಂದ ನೇರ ಬಿಗಿತ ಬಂದಿದ್ದು, ನಿರ್ಮಾಪಕರಿಗೆ ತಲೆನೋವು ತಂದಿದೆ.
ಇನ್ನು ಮುಂದೆ ರಾಜ್ಯದ ಎಲ್ಲ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರದ ಮಿತಿ ರೂ. 200 ಕ್ಕೆ ನಿಗದಿಯಾಗಲಿದೆ. ಈ ಕ್ರಮದಿಂದಾಗಿ ಬಿಗ್ ಬಜೆಟ್ ಚಿತ್ರಗಳು ಲಾಭ ಗಳಿಸುವಲ್ಲಿ ಮುಗ್ಗರಿಸುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಿಂದ ಕನ್ನಡದ ಹೊರಗಿನ ಭಾಷಾ ಸಿನಿಮಾಗಳಿಗೆ ಮೊದಲ ದಿನ ಟಿಕೆಟ್ ದರ 500ರೂ. ಏರಿದ ಉದಾಹರಣೆಗಳಿವೆ. ಹೀಗಾಗಿ ಟಿಕೆಟ್ ದರ ನಿಗದಿ ನಿಯಮದ ಜಾರಿಗೆ ನಿರೀಕ್ಷೆಗೂ ಮೀರಿ ರಿಯಾಕ್ಷನ್ ಬಂದಿದ್ದು ಸ್ವಾಭಾವಿಕ.
ಈ ನಡುವೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಹರಿಹರ ವೀರ ಮಲ್ಲು’ ಜುಲೈ 24ರಂದು ರಿಲೀಸ್ ಆಗಲಿದೆ. ಈಗಾಗಲೇ ಈ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇತ್ತು. ಆದರೆ ಚಿತ್ರ ಬಿಡುಗಡೆಗಾಗುವ ಕೆಲವೇ ದಿನಗಳ ಮುನ್ನ ಈ ಹೊಸ ನಿಯಮ ಜಾರಿಗೆ ಬಂದಿರುವುದು ನಿರ್ಮಾಪಕರ ತಲೆನೋವಾಗಿರುತ್ತದೆ. ಟಿಕೆಟ್ ದರ ಮಿತಿಯಿಂದ ಆರಂಭದ ವಾರದ ಕಲೆಕ್ಷನ್ ಕಡಿಮೆಯಾಗಬಹುದೆಂಬ ಅಂಜಿಕೆ ಇದೆ.
ಅದಾದರೂ, ಅಧಿಕಾರಿಗಳ ಪ್ರಕಾರ ಹೊಸ ನಿಯಮದ ವಿರುದ್ಧ ಯಾವುದೇ ವಿರೋಧವಿದ್ದರೆ, 15 ದಿನಗಳೊಳಗೆ ಅಪೀಲು ಸಲ್ಲಿಸಬಹುದಾಗಿದೆ. ಹೀಗಾಗಿ, ಮೊದಲ ವಾರದಲ್ಲಿ ಈ ಸಿನಿಮಾ ಹೆಚ್ಚು ಲಾಭ ಪಡೆಯುವ ಸಾಧ್ಯತೆ ಉಳಿದಿದೆ. ಆದರೆ, ಬುಕಿಂಗ್ ಆರಂಭವಾದ ನಂತರ ಮಾತ್ರ ನಿಜವಾದ ಚಿತ್ರಣ ಹೊರ ಬೀಳಲಿದೆ.
ಈ ಪೀರಿಯಡ್ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಪವನ್ಕಲ್ಯಾಣ್ ಜತೆಗೆ ನಟಿ ನಿಧಿ ಅಗರ್ವಾಲ್ ಹಾಗೂ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತದ ಜವಾಬ್ದಾರಿಯನ್ನು ಎಂಎಂ ಕೀರವಾಣಿ ವಹಿಸಿದ್ದು, ಚಿತ್ರ ನಿರ್ದೇಶನವನ್ನು ಕ್ರಿಶ್ ಜಗರ್ಲಮುಡಿ ಮಾಡಿದ್ದಾರೆ.