ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಮಾರ್ಗದಲ್ಲಿ ನಡೆದ ದರೋಡೆ ಪ್ರಕರಣವೊಂದು ರಾಜ್ಯದಾದ್ಯಂತ ಆತಂಕ ಉಂಟುಮಾಡಿದೆ. ಕೇರಳಕ್ಕೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಗಳ ಕಾರನ್ನು ಖದೀಮರು ಗುರಿ ಮಾಡಿಕೊಂಡು ಸಿನಿಮಾ ಸ್ಟೈಲ್ನಲ್ಲಿ ದಾಳಿ ನಡೆಸಿದ್ದಾರೆ.
ಬಂಡೀಪುರ ಕಾಡಿನೊಳಗೆ ಮೊದಲು ವಾಹನಕ್ಕೆ ಹಿಂಭಾಗ ಮತ್ತು ಮುಂಭಾಗದಲ್ಲಿ ಢಿಕ್ಕಿ ಹೊಡೆದು ಕಾರು ನಿಲ್ಲಿಸಿದ್ದಾರೆ. ನಂತರ ಮೂವರು ಖದೀಮರು ಕಾರಿನಿಂದ ಇಳಿದು ಬಂದಿದ್ದು, ಕಾರಿನಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರಿನ ಹ್ಯಾಂಡ್ ಬ್ರೇಕ್ ಬಳಿ ಇಟ್ಟುಕೊಂಡಿದ್ದ 1.2 ಕೆಜಿ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ಈ ದಾಳಿ ಸಂಪೂರ್ಣವಾಗಿ ಪ್ರಿ-ಪ್ಲ್ಯಾನ್ಡ್ ಆಗಿ ನಡೆದಿರುವುದು ಪೊಲೀಸರು ನಡೆಸಿದ ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದುಬಂದಿದೆ.
ಘಟನೆಯ ನಂತರ ಕೇರಳ ಮೂಲದ ವ್ಯಾಪಾರಿಗಳು ಗುಂಡ್ಲುಪೇಟೆ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದ್ಯ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಸ್ಥಳಕ್ಕೆ ಎಸ್ಪಿ ಕವಿತಾ ಮತ್ತು ಎಎಸ್ಪಿ ಶಶಿಧರ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಬಂಡೀಪುರ ಮಾರ್ಗದಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ.

