ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಕೋಟ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ವಹಿಸುತ್ತಿದ್ದ ಸಿಟಿ ಬಸ್ ಭೀಕರ ರಸ್ತೆ ಅಪಘಾತಕ್ಕೀಡಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬುಧವಾರ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಳಗ್ಗೆ ಎಂದಿನಂತೆ ರಸ್ತೆಗಿಳಿದಿದ್ದ ಬಸ್ ವಾಹನಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಯಲ್ಲಿ ಯಾವುದೇ ನಿಯಂತ್ರಣವಿಲ್ಲದೇ ಚಲಾಯಿಸಿದ ಪರಿಣಾಮ, ಬಸ್ ಪಕ್ಕದಲ್ಲಿ ಸಾಗುತ್ತಿದ್ದ ಎರಡು ರಿಕ್ಷಾ ಹಾಗೂ 7-8 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದ್ವಿಚಕ್ರ ಮತ್ತು ತ್ರಿ ಚಕ್ರ ವಾಹನ ಚಾಲಕರು ರಸ್ತೆ ಮೇಲೆ ಬಿದ್ದಿದ್ದು, ಅವರ ಮೇಲೆ ವಾಹನ ಹರಿದು ಹೋಗಿದೆ.
ಘಟನೆಯಲ್ಲಿ ಇಬ್ಬರು ಪುರುಷ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 4 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಬುಧವಾರ ಜನರು ಆಫೀಸ್ಗೆ ಹೋಗುವ ಧಾವಂತದಲ್ಲಿದ್ದಾಗ ಇಂದಿರಾ ವೃತ್ತದ ಬಳಿ ಬಂದ ಬಸ್ ಟ್ರಾಫಿಕ್ ಸಿಗ್ನಲ್ ಬಿಟ್ಟಾಕ್ಷಣ ಮಾಟೇಲಾ ಕಡೆಯಿಂದ ವೇಗವಾಗಿ ನುಗ್ಗಿದೆ. ಪರಿಣಾಮ ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ಸವಾರರು ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
35 ವರ್ಷದ ರಾಜುಭಾಯಿ ಗಿಡಾ, 35 ವರ್ಷದ ಲಾಲೋ ಅಲಿಯಾಸ್ ಚಿನ್ಮಯ್ ಹರ್ಷದ್ಬಾಯ್ ಭಟ್ , 55 ವರ್ಷದ ಕಿರಣ್ ಚಂದ್ರೇಶ್ಭಾಯ್ ಕಕ್ಕರ್, 40 ವರ್ಷ ಸಂಗೀತಾಬೆನ್ ಚೌಧರಿ ಸ್ಥಳದಲ್ಲಿ ಸಾವನ್ನಪ್ಪಿದವರಾಗಿದ್ದಾರೆ.