ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಭಟ್ವಾಡಿ ತಹಸಿಲ್ನ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತ 50 ನಾಗರಿಕರು, 8 ಸೈನಿಕರು ಮತ್ತು ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಕಾಣೆಯಾಗಿದ್ದಾರೆ.
ಇದೀಗ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರವಾಹ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವಾಗಿ ತಲಾ 5 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ.
ವಿಪತ್ತಿನಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೂ ಅದೇ ಮೊತ್ತವನ್ನು ನೀಡಲಾಗುವುದು ಎಂದಿದ್ದಾರೆ.
ಮುಖ್ಯಮಂತ್ರಿ ಕಚೇರಿ (ಸಿಎಂಒ) ಪ್ರಕಾರ, ಪ್ರವಾಹಪೀಡಿತ ಗ್ರಾಮಸ್ಥರ ಪುನರ್ವಸತಿ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಕಂದಾಯ ಕಾರ್ಯದರ್ಶಿ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿಯು 1 ವಾರದೊಳಗೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಲಿದೆ.
ಉತ್ತರಾಖಂಡದ ಉತ್ತರಕಾಶಿಯಲ್ಲಿ ಹಠಾತ್ ಪ್ರವಾಹ ಸಂಭವಿಸಿತ್ತು. ಐದನೇ ದಿನವೂ ಸಹ ಕಾಣೆಯಾದ ಜನರ ನಿಖರವಾದ ಸಂಖ್ಯೆ ಸಿಗುತ್ತಿಲ್ಲ. ಧರಾಲಿ ಗ್ರಾಮದಲ್ಲಿ ಮಾತ್ರ ಸುಮಾರು 200 ಜನರು ಸಾವನ್ನಪ್ಪಿರಬಹುದು ಎಂದು ನಿವಾಸಿಗಳು ಹೇಳಿದ್ದಾರೆ. ಆದರೆ, ಉತ್ತರಾಖಂಡದ ಬಿಜೆಪಿ ಸರ್ಕಾರ ಕೇವಲ 6 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳುತ್ತಿದೆ. ನಿಖರ ಸಂಖ್ಯೆಗಳ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ಉತ್ತರಾಖಂಡದ ಎಸ್ಪಿ ಹೇಳಿದ್ದಾರೆ.