ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಆಪ್ ಸರ್ಕಾರದ ವಿರುದ್ಧ ಪಾರ್ಟಿ ಶಾಸಕರೇ ಸಿಡಿದೆದಿದ್ದಾರೆ. ಅನೇಕ ಬಾರಿ ನೀರು, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವುದಾಗಿ ಖುದ್ದು ಸಿಎಂ ಅರವಿಂದ್ ಕೇಜ್ರಾವಾಲ್ ಹೇಳುತ್ತಾ ಬಂದಿದ್ದಾರೆ. ಆದರೆ ಹಲವು ಭಾರಿ ಇದರ ಅಸಲಿಯತ್ತು ಬಹಿರಂಗವಾಗಿದೆ.
ಇದೀಗ ದೆಹಲಿ ಸದನದಲ್ಲಿ ಖುದ್ದು ಆಮ್ ಆದ್ಮಿ ಪಾರ್ಟಿ ಶಾಸಕ ಭೂಪಿಂದರ್ ಸಿಂಗ್ ದೆಹಲಿ ಜಲಮಂಡಳಿ ಹಾಗೂ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆ ಕುರಿತು ವಿವರಿಸಿದ್ದಾರೆ.
ದೆಹಲಿ ಜನರು ಮಲಿನ ನೀರು ಕುಡಿಯುತ್ತಿದ್ದಾರೆ. ಈ ನೀರಿನಿಂದ ಆರೋಗ್ಯ ಕೆಡುತ್ತಿದೆ. ಸರಿಪಡಿಸಲು ಜಲಮಂಡಳಿ ಬಳಿ ಹಣವಿಲ್ಲ. ಜಲಮಂಡಳಿಗೆ ಕಳೆದ ಒಂದೂವರೆ ವರ್ಷದಿಂದ ಜಲಮಂಡಳಿಯಲ್ಲಿ ಹಣವಿಲ್ಲದೆ ಪರದಾಡುತ್ತಿದೆ ಎಂದು ಹೇಳಿದ್ದಾರೆ.
ದೆಹಲಿ ನಾಗರೀಕರ ಮೇಲಿನ ಕಾಳಜಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ದೆಹಲಿ ಜಲಮಂಡಳಿಯ ಅಸಲಿ ಕತೆಯನ್ನು ಬಿಚ್ಚಿಟ್ಟಿದ್ದಾರೆ. ತಮ್ಮದೇ ಪಕ್ಷದ ಶಾಸಕರ ಮಾತಿನಿಂದ ಇದೀಗ ಆಮ್ ಆದ್ಮಿ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ.
ನನ್ನ ವಿಧಾನಸಭಾ ಕ್ಷೇತ್ರದ ಮಾತ್ರ ಸಮಸ್ಯೆಯಲ್ಲ.ಸಂಪೂರ್ಣ ದೆಹಲಿ ಕ್ಷೇತ್ರಗಳ ಸಮಸ್ಯೆಯನ್ನು ಇಲ್ಲಿಡುತ್ತಿದ್ದೇನೆ. ಕಳೆದ ಒಂದೂವರೆ ವರ್ಷದಿಂದ ಜಲಮಂಡಳಿಯಿಂದ ಯಾವುದೇ ಕೆಲಸವಾಗುತ್ತಿಲ್ಲ. ಇದರಿಂದ ಜನರು ಅತ್ಯಂತ ಕಳಪೆ ಹಾಗೂ ಮಲಿನ ನೀರನ್ನು ಕುಡಿಯುವಂತಾಗಿದೆ. ಕೆಟ್ಟ ವಾಸನೆ, ಕಲುಷಿತ ನೀರು ಕುಡಿಯುತ್ತಿರುವ ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆ. ಜನರ ಆರೋಗ್ಯ ಹಾಳಾಗುತ್ತಿದೆ. ಇದು ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉತ್ತಮ ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಕೆಯಾಗುತ್ತಿಲ್ಲ ಎಂದು ಹಲವು ಸಾರ್ವಜನಿಕರು ದೂರು ನೀಡಿದ್ದಾರೆ ಎಂದು ಭೂಪಿಂದರ್ ಸಿಂಗ್ ಜೂನ್ ಹೇಳಿದ್ದಾರೆ.
ಈ ಕುರಿತು ಜಲಮಂಡಳಿಯನ್ನು ಪ್ರಶ್ನಿಸಿದರೆ ಒಂದು ಉತ್ತರ ನೀಡುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಜಲಮಂಡಲಿಯಲ್ಲಿ ನಾಯ ಪೈಸೆ ಇಲ್ಲ. ಹೀಗಾಗಿ ಯಾವುದೇ ಕಾಮಾಗಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಜಲಮಂಡಳಿ ಅಧಿಕಾರಿಗಳ ಜೊತೆಗೂ ಮಾತನಾಡಿದ್ದೇನೆ. ಆದರೆ ಮಂಡಳಿಯಲ್ಲಿ ಹಣವಿಲ್ಲದ ಕಾರಣ ಜಲಮಂಡಳಿ ಅಸಾಹಾಯಕ ಸ್ಥಿತಿಯಲ್ಲಿದೆ. ಜನರು ಬಾಟಲಿಯಲ್ಲಿ ನೀರು ತುಂಬಿಕೊಂಡು ಬಂದು ದೂರು ನೀಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಗಟರ್ ನೀರಾಗಿದೆ. ಇದನ್ನು ಕುಡಿಯುವುದು ಮಾತು ಬದಿಗಿರಲಿ, ಮುಟ್ಟಲು ಕೂಡ ಯೋಗ್ಯವಿಲ್ಲ ಎಂದು ಸದನದಲ್ಲಿ ಆಪ್ ಶಾಸಕ ಹೇಳಿದ್ದಾರೆ.
ನೀರಿನ ಪೈಪ್ಗಳು ಒಡೆದಿದೆ. ಇನ್ನು ಹಳೇ ಪೈಪ್ಗಳನ್ನು ಬದಲಿಸಬೇಕು. ಈ ಕುರಿತು ಟೆಂಡರ್ ಕರೆದು ಎಜೆನ್ಸಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಆದರೆ ಮಂಡಳಿ ಬಳಿ ಹಣವಿಲ್ಲ. ಬೋರ್ವೆಲ್ ಕೊರೆಸಲು ಹಣವಿಲ್ಲ, ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದ ಒಪ್ಪಂದ ಅಂತ್ಯಗೊಂಡಿದೆ. ಹೊಸ ಒಪ್ಪಂದ ಮಾಡಲು ಹಣವಿಲ್ಲ. ಹೀಗಾದರೆ ಜನರು ಯಾರ ಬಳಿ ಹೋಗಬೇಕು? ಹೀಗಾಗಿ ಈ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ. ಹಣಕಾಸು ಇಲಾಖೆ, ತಕ್ಷಣವೇ ಹಣ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಬೇಕು ಎಂದು ಭೂಪಿಂದರ್ ಸಿಂಗ್ ಜೂನ್ ಸದನದಲ್ಲಿ ಮನವಿ ಮಾಡಿದ್ದಾರೆ.