ಹೊಸದಿಗಂತ ವರದಿ, ಹಾವೇರಿ:
ಜಿಲ್ಲಾಸ್ಪತ್ರೆಯ ಕಟ್ಟಡ ಸೋರಿತ್ತಿರುವದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೂಕ್ತ ಕ್ರಮ ಜರುಗಿಸದ ಇಂಜನೀಯರ ಮಂಜುನಾಥ ಅವರನ್ನು ಸ್ಥಳದಲ್ಲೇ ಅಮಾನತು ಮಾಡುವಂತೆ ಆದೇಶಿಸಿದದ್ದಾರೆ .
ಜಿಲ್ಲಾ ಆಸ್ಪತ್ರೆಯ ಮಹಿಳೆಯರ, ಅಪೌಷ್ಟಿಕತೆ ಇರುವ ಮಕ್ಕಳ ವಾರ್ಡ್ ಸೇರಿದಂತೆ ಎರಡನೇ ಮಹಡಿಯಲ್ಲಿನ ಬಹುತೇಕ ಕೊಠಡಿಗಳು ಸೋರುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು ಇಂಜನೀಯರ ಹಾಗೂ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಗರಂ ಆದರು.
ಒಂದೊಂದೇ ವಾರ್ಡಗಳ ವೀಕ್ಷಣೆ ಮಾಡುತ್ತ ಆಗಮಿಸಿದ ಸಿಎಂ ವಾರ್ಡಗಳಲ್ಲಿ ದಾಖಲಾದ ರೋಗಿಗಳನ್ನು ಛಾವಣಿ ಸೋರುತ್ತಿದೆಯೇ ಎಂದು ವಿಚಾರಿಸಿದರು ಜನತೆ ವಾಸ್ತವತೆಯನ್ನು ತಿಳಿಸುತ್ತಿದ್ದಂತೆ ಸಿಎಂ ಅವರುಕಟ್ಟಡ ನಿರ್ಮಾಣದ ಉಸ್ತುವಾರಿ ಇಂಜನೀಯರ ಮಂಜುನಾಥ ಅವರನ್ನು ತಕ್ಷಣ ಅಮಾನತ್ ಮಾಡುವಂತೆ ಅವರ ಪಿಎಸ್ ವೆಂಕಟೇಶ ಅವರಿಗೆ ದೂರವಾಣಿ ಮೂಲಕ ಸೂಚಿಸಿ ಈ ಕುರಿತು ಆರೋಗ್ಯ ಇಲಾಖೆಯ ಸೆಕ್ರೆಟರಿ ಅವರಿಗೆ ನಿರ್ದೇಶನ ನೀಡುವುದಕ್ಕೆ ಆದೇಶಿಸಿದರು.
ಗರಂ ಆದ ಸಿಎಂ
ಜಿಲ್ಲಾ ಆಸ್ಪತ್ರೆಯ ಕಟ್ಟಡ ಮಾಳಿಗೆ ಸೋರುತ್ತಿರುವುದನ್ನು ಸರಿಪಡಿಸುವುದಕ್ಕೆ ಮುಂದಾಗದ ಹಾವೇರಿ ಶಾಸಕ ಹಾಗೂ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತವಾರಿ ಸಚಿವ ಶಿವಾನಂದ ಪಾಟೀಲ, ಡಿಎಸ್ ಪಿ.ಎಸ್.ಹಾವನೂರ ಸೇರಿದಂತೆ ವೈದ್ಯಾಧಿಕಾರಿಗಳ ಮೇಲು ಗರಂ ಆದರು. ಜಿಲ್ಲಾಸ್ಪತ್ರೆ ಕಟ್ಟಡದ ಸ್ಥಿತಿ ಇಷ್ಟೆಲ್ಲಾ ಆಗುತ್ತಿದೆ ನೀವು ಏನ್ ಮಾಡ್ತಾ ಇದೀರಾ ಎಂದು ಗದರಿಸಿದ ಸಿಎಮ್. ಎನಯ್ಯಾ ನಿನಗೆ ಮನುಷ್ಯತ್ಬ ಇಲ್ವಾ, ಮಹಿಳೆಯರು ಮಕ್ಕಳು ಹೇಗೆ ಇರಬೇಕಿಲ್ಲಿ ಎಂದು ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳ ಮೇಲೆ ಅವಾಜ್ ಹಾಕಿದರು.
ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಗುತ್ತಿಗೆದಾರ ಕಟ್ಟಡ ನಿರ್ಮಾಣ ಪ್ರಾರಂಭದಲ್ಲಿ ಬಂದು ಹೋದ ನಂತರ ಮತ್ತೆ ಬಂದಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾದಾಗ ಆ ಗುತ್ತಿಗೆ ದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಆಸ್ಪತ್ರೆಯ ಸೋರುತ್ತಿದೆಯಾ ಎಂದು ಒಂದು ವಾರ್ಡ್ ಪ್ರವೇಶದ ದ್ವಾರದಲ್ಲಿನೇ ವೈದ್ಯಾಧಿಕಾರಿಗಳನ್ನು ಕೇಳಿದ ಸಂದರ್ಭದಲ್ಲಿ ಅವರು ಛಾವಣಿ ಸೋರುತ್ತಿಲ್ಲ ಎಂದರು. ಆದರೆ ಸಿಎಂ ಒಳ ನಡೆದು ವೀಕ್ಷಿಸಿದ ಸಂದರ್ಭದಲ್ಲಿ ಸೋರುತ್ತಿರುವುದನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ಗರಂ ಆದರು.