ಕೊಯಮತ್ತೂರು ಸ್ಫೋಟ ಪ್ರಕರಣ: 27 ವರ್ಷದ ಬಳಿಕ ಆರೋಪಿ ಕರ್ನಾಟಕದಲ್ಲಿ ಅರೆಸ್ಟ್

ಹೊಸದಿಗಂತ ವಿಜಯಪುರ:

ವರ್ಷಗಳಿಂದ ತಲೆಮರೆಸಿಕೊಂಡಿದ್ದ, ತಮಿಳುನಾಡಿನ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ತಮಿಳು ನಾಡು ಪೊಲೀಸರು ನಗರದಲ್ಲಿ ಬಂಧಿಸಿದ್ದಾರೆ.

ಗುಂಡ್ಲುಪೇಟೆ ನಿವಾಸಿ ಸಿದ್ದಿಕ್ಕಿ ರಾಜಾ ಉರ್ಫ್ ಟೈಲರ್ ರಾಜಾ ಉರ್ಫ್ ಶಹಜಹಾನ್ ಅಬ್ದುಲ್ ಮಜೀದ್ ಮಕಾಂದರ್‌ ಉರ್ಫ್ ಶಹಜಹಾನ್ ಶೇಕ್ (50) ಬಂಧಿತ ಆರೋಪಿ.

1998 ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿರುವ ಮುಖ್ಯ ಆರೋಪಿ ಸಿದ್ದಿಕ್ಕಿ ರಾಜಾ ನನ್ನು ತಮಿಳುನಾಡು ಪೊಲೀಸ್‌, ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಗುಪ್ತಚರ ಇಲಾಖೆ ನೆರವಿನಿಂದ ನಗರದಲ್ಲಿ ಬಂಧಿಸಲಾಗಿದೆ.

ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದ ಸಿದ್ದಿಕ್ಕಿ ರಾಜಾ ಕೊಮತ್ತೂರು ಸ್ಫೋಟ ಪ್ರಕರಣದ ನಂತರ ರಾಜ್ಯದ ಹುಬ್ಬಳ್ಳಿ ಮತ್ತು ವಿಜಯಪುರ ನಗರದಲ್ಲಿ ಕಳೆದ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಹುಬ್ಬಳ್ಳಿಯ ಮಹಿಳೆಯೊಬ್ಬರನ್ನು ವಿವಾಹವಾಗಿದ್ದ ಆರೋಪಿ, ಕಳೆದ 12 ವರ್ಷಗಳಿಂದ ವಿಜಯಪುರ ನಗರದ ಎಪಿಎಂಸಿ ಸೇರಿದಂತೆ ಇತರೆಡೆ ತರಕಾರಿ ಮಾರಾಟ ಮಾಡಿಕೊಂಡಿದ್ದ ಎಂದು ಪೊಲೀಸ್ ಬಲ್ಲ ಮೂಲಗಳು ತಿಳಿಸಿವೆ.

ಬಾಂಬ್ ಸ್ಟೋಟ್ ಪ್ರಕರಣದ ತನಿಖೆ ಸಂಬಂಧ ತಮಿಳುನಾಡು ಪೊಲೀಸರು ಆರೋಪಿಯನ್ನು ಕೊಯಮತ್ತೂರಿಗೆ ಕರೆದೊಯ್ದು, ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.

1998ರಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರನ್ನು ಗುರಿಯಾಗಿಸಿಕೊಂಡು ನಡೆಸಿದ್ದ ಸ್ಫೋಟದಲ್ಲಿ 58 ಜನರು ಸಾವನ್ನಪ್ಪಿದರು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

1996ರಲ್ಲಿ ಕೊಯಮತ್ತೂರು ಜೈಲಿನಲ್ಲಿ ಈತ ನಡೆಸಿದ್ದ ಪೆಟ್ರೋಲ್ ಬಾಂಬ್‌ ದಾಳಿಯಲ್ಲಿ ಜೈಲು ವಾರ್ಡನ್ ಸಾವನ್ನಪ್ಪಿದರು. ಭಯೋತ್ಪಾದನಾ ಪ್ರಕರಣಗಳ ಜೊತೆಗೆ, 1996ರಲ್ಲಿ ನಾಗೂರಲ್ಲಿ ನಡೆದ ಸಯೀತಾ ಕೊಲೆ ಪ್ರಕರಣ ಮತ್ತು 1997ರಲ್ಲಿ ಮಧುರೈನಲ್ಲಿ ನಡೆದ ಜೈಲ‌ರ್ ಜಯಪ್ರಕಾಶ್ ಅವರ ಕೊಲೆ ಪ್ರಕರಣದಲ್ಲಿ ಸಿದ್ದಿಕ್ಕಿ ರಾಜಾ ಆರೋಪಿಯಾಗಿದ್ದ.

ಕೊಯಮತ್ತೂರಿನ ಸ್ಫೋಟ ಪ್ರಕರಣ ಹಿನ್ನೆಲೆ:

1997ರ ನವೆಂಬರ್- ಡಿಸೆಂಬರ್‌ನಲ್ಲಿ ಕೊಯಮತ್ತೂರಿನಲ್ಲಿ ಹಿಂದೂ- ಮುಸ್ಲಿಂ ಗಲಾಟೆಗಳು ನಡೆದಿದ್ದವು. ಅಲ್ ಉಮ್ಮಾ ಸಂಘಟನೆಯ ಕಾರ್ಯಕರ್ತನನ್ನು ಬಂಧಿಸಿದ್ದಾರೆ ಎಂದು ಆ ಸಂಘಟನೆಯ ಕೆಲವರು ಸ್ಥಳೀಯ ಪೊಲೀಸ್‌ ಕಾನ್‌ಸ್ಟೆಬಲ್‌ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪ್ರತಿಯಾಗಿ ಕೊಯಮತ್ತೂರಿನಲ್ಲಿ ಸರಣಿ ಕೋಮು ಗಲಭೆಗಳು ನಡೆದಿದ್ದವು. ಆ ಗಲಭೆಗಳಲ್ಲಿ 18 ಮುಸ್ಲಿಂರು, 2 ಹಿಂದೂಗಳು ಸೇರಿ 20 ಜನರು ಮೃತರಾಗಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದಿಕ್ಕಿ ರಾಜಾ ಹಾಗೂ ಇತರರು ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. 1998 ಫೆ. 14 ರಂದು ಅಡ್ವಾಣಿ ಅವರು ಕೊಯಮತ್ತೂರಿಗೆ ಚುನಾವಣಾ ಸಭೆಗೆ ತೆರಳಿದ್ದರು, ಅವರು ಬರುವ ಸಮಯದಲ್ಲಿ ಕೊಯಮತ್ತೂರಿನ 12 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 12 ಸ್ಥಳಗಳಲ್ಲಿ 11 ಸರಣಿ ಬಾಂಬ್
ಸ್ಪೋಟಗೊಂಡು 58 ಜನ ಮೃತರಾಗಿದ್ದರು. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪೊಲೀಸ್ ಮುಂಜಾಗ್ರತೆಯಿಂದ ಎಲ್.ಕೆ ಅಡ್ವಾಣಿ ಅವರು ಅಂದು ಪಾರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!