ಹೊಸದಿಗಂತ ಡಿಜಿಟಲ್ ಡೆಸ್ಕ್:
2017ರ ಬಳಿಕ ಇದೀಗ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕರುಣ್ ನಾಯರ್, ತಮ್ಮ ಹಿಂದಿನ ದಿನಗಳ ಬಗ್ಗೆ, ಎದುರಿಸಿದ ಸಂಕಷ್ಟಗಳ ಬಗ್ಗೆ ಮತ್ತು ಆ ವೇಳೆಯಲ್ಲಿ ಬಂದಿದ್ದ “ನಿವೃತ್ತಿ” ಸಲಹೆಯ ಬಗ್ಗೆ ಬಹಿರಂಗವಾಗಿ ಮಾತುಗಳನ್ನಾಡಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಕರುಣ್, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, “ಒಬ್ಬ ಖ್ಯಾತ ಭಾರತೀಯ ಕ್ರಿಕೆಟಿಗ ನನಗೆ ಫೋನ್ ಮಾಡಿ ನಿವೃತ್ತಿಯಾಗಲು ಸಲಹೆ ನೀಡಿದ್ದರು. ಟಿ20 ಲೀಗ್ಗಳಲ್ಲಿ ಆಡಿ ಹಣ ಸಂಪಾದಿಸಬಹುದು ಎಂದೂ ಹೇಳಿದರು. ಆದರೆ ನನ್ನ ಉದ್ದೇಶ ಭಾರತ ತಂಡಕ್ಕೆ ಮತ್ತೆ ಆಡೋದು. ಹೀಗಾಗಿ ನಾನು ಹೋದ ದಾರಿಯಲ್ಲೇ ಮುಂದುವರಿದು, ಕಠಿಣ ಪ್ರಯತ್ನದ ಫಲವಾಗಿ ಮತ್ತೆ ಆಯ್ಕೆಯಾಗಿದ್ದೇನೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಕರಣ್ ನಾಯರ್, ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ತ್ರಿಶತಕ ಬಾರಿಸಿದ ಸೆಂಚುರಿ ಸ್ಟಾರ್. ಆದರೆ 2017ರ ಬಳಿಕ ಅವರು ತಂಡದಿಂದ ಹೊರಹೋಗಿದ್ದು, ನಂತರ ರಾಜ್ಯ ಮಟ್ಟದ ತಂಡವಾದ ಕರ್ನಾಟಕದಿಂದಲೂ ಔಟ್ ಆಗಿದ್ದರು. ಆದರೆ ತಮ್ಮ ಆಟವನ್ನು ಮರೆತು ಬಿಡದೆ, ಇತ್ತೀಚೆಗೆ ವಿದರ್ಭ ಪರ ಆಡುವ ಮೂಲಕ ಅವರು ಮತ್ತೆ ಗಮನ ಸೆಳೆದಿದ್ದರು. ಇದಕ್ಕೆ ಪೂರಕವಾಗಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಅವರ ದ್ವಿಶತಕ ಪ್ರದರ್ಶನ ಕೂಡ ಆಯ್ಕೆದಾರರ ಕಣ್ಣು ಬೀಳುವಂತೆ ಮಾಡಿದೆ.
ಈಗ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆದಿರುವ ಕರುಣ್, “ಇದು ನನಗೆ ಬಹುಮುಖ್ಯ ಘಳಿಗೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವೆ” ಎಂಬ ಧೈರ್ಯದ ಮಾತು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಕರುಣ್ ನಾಯರ್, ಮೊದಲ 11ರಲ್ಲಿಯೇ ಸ್ಥಾನ ಪಡೆಯುವ ಸಾಧ್ಯತೆಯೂ ಹೆಚ್ಚಾಗಿದೆ. ಎಲ್ಲರ ಕಣ್ಣೂ ಈಗ ಅವರ ಮೇಲೆ ನೆಟ್ಟಿವೆ. ಮತ್ತೆ ಬಿಗ್ ಹಿಟ್ ಕೊಡ್ತಾರಾ ಕರುಣ್? ಉತ್ತರ ಬಹುಶಃ ಸದ್ಯದಲ್ಲೇ ಸಿಗಲಿದೆ!