ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರುನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕರಾವಳಿ ಪ್ರದೇಶದ ಬೆಳವಣಿಗೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಕೋಮುವಾದದ ವಾತಾವರಣದಿಂದಾಗಿ ಕರಾವಳಿ ಭಾಗದಲ್ಲಿ ಐಟಿ-ಬಿಟಿ ಕ್ಷೇತ್ರದ ಹೂಡಿಕೆ ಕುಂಠಿತವಾಗುತ್ತಿದೆ ಎಂದು ಹೇಳಿದರು.
ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಂಪನಿಗಳು ಹೂಡಿಕೆ ಮಾಡಲು ಸಿದ್ಧವಾಗಿದ್ದರೂ, ಭದ್ರತಾ ಪರಿಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ ಎಂದು ತಿಳಿಸಿದರು. ಉದ್ಯೋಗಿಗಳಿಗೆ ತೊಂದರೆ ಉಂಟಾದರೆ ಏನು ಎಂಬ ಪ್ರಶ್ನೆ ಅವರಲ್ಲಿ ಇದೆ ಎಂದರು. ಸಮಾಜದಲ್ಲಿ ಧರ್ಮಗುರುಗಳು ಮತ್ತು ರಾಜಕಾರಣಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:
ಧರ್ಮದ ಹೆಸರಿನಲ್ಲಿ ಹುಟ್ಟುವ ವಿಭಜನೆಯ ಮನೋಭಾವ ನಿಲ್ಲಬೇಕು ಎಂದು ಹೇಳಿದ ಅವರು, ತಾವು ಅದಮಾರು ಮಠದಲ್ಲಿ ವಿದ್ಯಾಭ್ಯಾಸ ಮಾಡಿದವನು ಎಂದು ಹೇಳಿ, ಧರ್ಮ ಮನುಷ್ಯನಿಗಾಗಿ ಇರಬೇಕು ಹೊರತು ಮನುಷ್ಯ ಧರ್ಮಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಇತಿಹಾಸದ ವಿಚಾರಗಳನ್ನು ರಾಜಕೀಯವಾಗಿ ಬಳಸುವ ಪ್ರವೃತ್ತಿ ಬಿಟ್ಟು ಸಮಾಜದ ಪ್ರಗತಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.



