March 15, 2026
Sunday, March 15, 2026
spot_img

ರಾಷ್ಟ್ರಪತಿ ವಿಮಾನಕ್ಕೆ ‘ಕಾಂಕ್ರೀಟ್’ ತಲೆನೋವು’: ಹವಾಮಾನ ಬದಲಾವಣೆ, ಲ್ಯಾಂಡಿಂಗ್ ಪ್ಯಾಡ್ ವೈಫಲ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿದ್ದ ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪ್ರಮದಮ್‌ನಲ್ಲಿನ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಲ್ಯಾಂಡಿಂಗ್ ಆಗುವಾಗ ಹೊಸದಾಗಿ ನಿರ್ಮಿಸಲಾದ ಕಾಂಕ್ರೀಟ್ ಹೆಲಿಪ್ಯಾಡ್‌ನಲ್ಲಿ ಸಿಲುಕಿಕೊಂಡಿದೆ.

ರಾಷ್ಟ್ರಪತಿಗಳು ಶಬರಿಮಲೆಗೆ ಭೇಟಿ ನೀಡುವ ವೇಳೆ ಈ ಘಟನೆ ಸಂಭವಿಸಿದ್ದು, ಹೆಲಿಕಾಪ್ಟರ್‌ನ ಒಂದು ಚಕ್ರ ಹೊಸ ಕಾಂಕ್ರೀಟ್‌ನಲ್ಲಿ ಆಳವಾಗಿ ಹೂತುಹೋಗಿದೆ. ಮೂಲಗಳ ಪ್ರಕಾರ, ಕೆಟ್ಟ ಹವಾಮಾನದಿಂದಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಅನ್ನು ಪಂಪಾ ಬಳಿಯ ನೀಲಕ್ಕಲ್‌ನಿಂದ ಕೊನೆಯ ಕ್ಷಣದಲ್ಲಿ ಪ್ರಮದಮ್‌ಗೆ ಬದಲಾಯಿಸಲಾಗಿತ್ತು. ಆತುರದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ಲ್ಯಾಂಡಿಂಗ್ ಪ್ಯಾಡ್ ಪೂರ್ಣವಾಗಿ ಗಟ್ಟಿಯಾಗದ ಕಾರಣ, ಅದು ಹೆಲಿಕಾಪ್ಟರ್‌ನ ಭಾರವನ್ನು ತಾಳಲಾರದೆ ಕುಸಿದಿದೆ.

ಘಟನೆ ನಡೆದ ಕೂಡಲೇ ರಾಷ್ಟ್ರಪತಿ ಮುರ್ಮು ಅವರು ರಸ್ತೆ ಮಾರ್ಗದ ಮೂಲಕ ಶಬರಿಮಲೆಯ ತಪ್ಪಲಿನಲ್ಲಿರುವ ಪಂಪಾಗೆ ತೆರಳಿದರು. ನಂತರ, ಹೆಲಿಪ್ಯಾಡ್‌ನಲ್ಲಿ ಸಿಲುಕಿಕೊಂಡಿದ್ದ ಹೆಲಿಕಾಪ್ಟರ್ ಅನ್ನು ಹೊರತೆಗೆಯಲು ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ, ಹಲವಾರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೆಲಿಕಾಪ್ಟರ್‌ನ ಚಕ್ರಗಳನ್ನು ತಳ್ಳುತ್ತಿರುವ ದೃಶ್ಯಗಳು ಕಂಡುಬಂದವು. ವಿಐಪಿ ಭದ್ರತಾ ವ್ಯವಸ್ಥೆಯಲ್ಲಿ ಕೊನೆಯ ಕ್ಷಣದಲ್ಲಿ ಆದ ಈ ಬದಲಾವಣೆ ಮತ್ತು ನಿರ್ಲಕ್ಷ್ಯ ಈಗ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !