ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಹಾಗು ಕೇಂದ್ರದ ನಡುವಿನ ಅಕ್ಕಿ ವಿಚಾರದ ವಾಕ್ಸಮರ ಮುಂದುವರಿದಿದ್ದು, ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಸವಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿರುಗೇಟು ಕೊಟ್ಟಿದ್ದಾರೆ.
ಎಫ್ಸಿಐ (FCI) ಪತ್ರ ಹಾಕಿ ಟ್ವೀಟ್ ಮಾಡಿರುವ ಸಿಎಂ, ಸಿ.ಟಿ ರವಿ ಮತ್ತಿತರ ಬಿಜೆಪಿ ನಾಯಕರು ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ. ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಬಿಜೆಪಿಗರು ಆಗ್ರಹಿಸಬೇಕು. ಅದನ್ನು ಬಿಟ್ಟು ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ ಎಂದು ಟ್ವಿಟ್ಟರ್ನಲ್ಲಿ ಕಿಡಿಕಾರಿದ್ದಾರೆ.
ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಸರ್ಕಾರ ಅನ್ನಭಾಗ್ಯ (Anna Bhagya) ಯೋಜನೆಯ ಅಕ್ಕಿಯನ್ನು ಕೊಡುಲುಜುಲೈ ತಿಂಗಳಿಂದ ನಿರ್ಧರಿಸಿತ್ತು. ಈ ಬಗ್ಗೆ ಎಫ್ಸಿಐನೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಎಫ್ಸಿಐ ಅಕ್ಕಿಯನ್ನು ನೀಡಲು ನಿರಾಕರಿಸಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದರು. ಈ ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ್ದರು.
ಭಾರತೀಯ ಆಹಾರ ನಿಗಮ (FCI) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕರಾರು ಪತ್ರ ತೋರಿಸಲಿ ಎಂದು ಸಿ.ಟಿ ರವಿ ಸವಾಲು ಹಾಕಿದ್ದರು. ಇದಕ್ಕೆ ಉತ್ತರವಾಗಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಪತ್ರ ಬಹಿರಂಗಪಡಿಸಿದ್ದಾರೆ.