ಹೊಸದಿಗಂತ ವರದಿ, ಕಲಬುರಗಿ:
ಈ ಸರಕಾರದಲ್ಲಿ ಗಂಡಸ್ತನ ಇರುವವರು ಯಾರೂ ಇಲ್ಲ ಎಂದುಕೊಂಡಿದ್ದೆ.ಆದರೆ, ಶಾಸಕ ಬಿ.ಆರ್.ಪಾಟೀಲ್ ಗಂಡಸ್ತನ ತೋರಿಸುತ್ತಿದ್ದು ಅವರಿಗೆ ಕೃತಜ್ಞತೆ ಹೇಳುತ್ತೇನೆ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ನಗರದಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಉತ್ತರ ನೀಡುತ್ತಿರಲಿಲ್ಲ. ಇದೀಗ ಶಾಸಕ ಬಿ.ಆರ್.ಪಾಟೀಲ್,ರಾಜು ಕಾಗೆ, ಗೋಪಾಲ ಕೃಷ್ಣ ಮಾತನಾಡುತ್ತಿದ್ದಾರೆ. ಪಾಟೀಲರು ಸಿಎಂ ಜೊತೆ ಭೇಟಿ ಮಾಡಿದರೆ ಭ್ರಷ್ಟಾಚಾರ ಇಲ್ಲವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಮಾತೆತ್ತಿದರೆ ನಾವು ಏನು ಮಾಡಿಲ್ಲ ಎಂಬುವವರು ಕೇವಲ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರಾ? ಇದಕ್ಕೂ ಮುನ್ನ ನಡೆದ ವಾಲ್ಮೀಕಿ, ಮುಡಾ ಸೈಟ್ ಕೇಸ್ ಏನು ಆಯ್ತು? ಬಿಜೆಪಿ 40 ಪರ್ಸೆಂಟ್ ಕಮಿಷನ್ ಅಂದ್ರೂ ಅದು ಏನಾಯಿತು. ಇದು ಕೇವಲ ಇಂತಹ ಮಾತುಗಳ ಸರಕಾರವಾಗಿದೆ ಎಂದು ಹೇಳಿದರು.
ಬಡವರ ಹಣ ತಿಂದವರು ಹುಳ ಬಿದ್ದು ಸಾಯಲ್ಲಿ ಎಂಬ ಸಚಿವ ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಸ್ವಾಮಿ, ಇಂತಹ ಏಮೋಷನಲ್ ಕಥೆಗಳಿಗೆ ನಾನು ಉತ್ತರ ಕೊಡಲ್ಲ. ಪಾಪ ಅವರು ತಿನ್ನದೆ ಇರಬಹುದು. ಆದರೆ, ತಗೊಂಡು ಯಾರಿಗೆ ಕೊಟ್ಟರು ಎಂದು ತಿಳಿಸಬೇಕು. ಬಿಹಾರ ಎಲೆಕ್ಷನಗಾ? ಅಥವಾ ಬೇರೆ ಯಾವುದಾದರೂ ಎಲೆಕ್ಷನ್ಗಾ ಎಂದು ಸ್ಪಷ್ಟನೆ ನೀಡಬೇಕು ಎಂದರು.
ರಾಜ್ಯ ಸರಕಾರ ಬರೀ ಗ್ಯಾರಂಟಿ ಎಂದು ಹೇಳಿಕೊಂಡು ಜನರಿಗೆ ಮಕ್ಮಲ್ ಟೋಪಿ ಹಾಕುವ ಕೆಲಸ ಮಾಡುತ್ತಿದೆ. ಒಂದು ಅಭಿವೃದ್ಧಿ ಕೆಲಸ ಇಲ್ಲದೆ ಜನರ ರಕ್ತ ಹೀರುತ್ತಿದ್ದಾರೆ ಎಂದು ಟೀಕಿಸಿದರು.