ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಹಗರಣ, ಒಳ ಜಗಳ ಗಮನ ಬೆರೆಡೆ ಸೆಳೆಯಲು ರಾಜ್ಯಕ್ಕೆ ಅನುದಾನ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರತಿಷ್ಠೆಯ ವ್ಯಕ್ತಪಡಿಸಲು ಈ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಯುಪಿಎ ಸರ್ಕಾರದ ಅವಯಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆ 66 ಸಾವಿರ ಕೋಟಿ ಬಂದಿತ್ತು. ಬಿಜೆಪಿ ಕಳೆದ 10 ವರ್ಷದಲ್ಲಿ 2.36 ಲಕ್ಷ ಕೋಟಿ ನೀಡಿದೆ. ಯುಪಿಎ ಅನುದಾನ ನೀಡಿದ್ದು 86 ಸಾವಿರ ಕೋಟಿ, ಬಿಜೆಪಿ ಸರ್ಕಾರ ನೀಡಿದ್ದು, 2.82 ಲಕ್ಷ ಕೋಟಿ ನೀಡಿದೆ. ಅನುದಾನದಲ್ಲಿ ಹಂಚಿಕೆಯಲ್ಲಿ ಶೇ. 243 ರಷ್ಟು ಹಾಗೂ ತೆರಿಗೆ ಹಂಚಿಕೆಯಲ್ಲಿ ಶೇ. 246 ಜಾಸ್ತಿ ನೀಡಲಾಗಿದೆ ಎಂದು ತಿಳಿಸಿದರು.
ಎಲ್.ಕೆ. ಅಡ್ವಾನಿ ನಮಗೆ ಆದರ್ಶ:
ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾನಿ ಅವರಿಗೆ ಭಾರತ ರತ್ನ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎರಡು ಪಕ್ಷಗಳು ಇರಬೇಕು. ದೇಶದಲ್ಲಿ ಒಂದೇ ಪಕ್ಷ ವಿದ್ದಾಗ ವಿರೋಧ ಪಕ್ಷವನ್ನು ಬೆಳೆಸಿದರು. ಶ್ರದ್ಧೆ, ನಿಷ್ಠಾವಂತ ರಾಜಕಾರಣಕ್ಕೆ ಅವರು ಹೆಸರು ವಾಸಿಯಾಗಿದ್ದರು. ರಾಜಕಾರಣ ಆದಾಯ ಉದ್ಯೋಗವಾದ ಸಂದರ್ಭದಲ್ಲಿಯೂ ಶುದ್ಧ ರಾಜಕಾರಣ ಮಾಡಿದ್ದಾರೆ. ಬಿಜೆಪಿ ಎಲ್ಲ ನಾಯಕರಿಗೆ ಆದರ್ಶವಾಗಿದ್ದಾರೆ. ಅವರಷ್ಟು ದೇಶ ಯಾರು ಸುತ್ತಿಲ್ಲ. ರಾಮಮಂದಿರ ನಿರ್ಮಾಣದ ಆದೋಲನಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ಭಾರತ ರತ್ನ ನೀಡಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು