ದಿಗಂತ ವರದಿ ವಿಜಯಪುರ:
ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಷಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಪೊಲೀಸ್ ಮುಖ್ಯ ಪೇದೆಯೊಬ್ಬ ಖಾಕಿ ಸಮವಸ್ತ್ರದಲ್ಲಿಯೇ ನಗರದ ಎಸ್ಪಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ ಘಟನೆ ನಡೆದಿದೆ.
ಜಿಲ್ಲೆಯ ಆಲಮೇಲ ಪಟ್ಟಣ ಪೊಲಿಸ್ ಠಾಣೆಯ ಶಂಕ್ರಪ್ಪ ಎಸ್. ದೇಸಾಯಿ ಎಂಬ ಮುಖ್ಯ ಪೇದೆ, ವರ್ಗಾವಣೆ ವಿಷಯದಲ್ಲಿ ಅನ್ಯಾಯ ಆಗಿದೆ ಎಂದು ಆರೋಪಿಸಿ ಬುಧವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಶಂಕ್ರಪ್ಪ ದೇಸಾಯಿ ಕಳೆದ 4 ವರ್ಷದಿಂದ ಆಲಮೇಲ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದು, ದೇಸಾಯಿ ಪತ್ನಿ ಪುಷ್ಪಾ ಬ್ಯಾಕವಾಡ ಕೂಡ ವಿಜಯಪುರ ಐಆರ್ ಬಿ ಯಲ್ಲಿ
ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ವಿಜಯಪುರದ ವಿಜಲನ್ಸ್ ವಿಭಾಗಕ್ಕೆ ವರ್ಗಾವಣೆ ಕೇಳಿದ್ದರು. ಆದರೆ ದೇಸಾಯಿ ಬದಲು ವಿಜಯಪುರದ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಜಾತಾ ಚನಗೌಡ ಎಂಬವರಿಗೆ ಆ ಜಾಗೆಗೆ ನೇಮಕ ಮಾಡಲಾಗಿದ್ದು, ಇದರಿಂದ ಕೆರಳಿರುವ ಶಂಕರಪ್ಪ ದೇಸಾಯಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.