ಹೊಸದಿಗಂತ ವರದಿ ಹಾವೇರಿ:
ಜಿಲ್ಲೆಯಲ್ಲಿ ಕಾಡಾನೆ ದಾಳಿ ಶನಿವಾರ ಕೂಡ ಮುಂದುವರೆದಿದೆ. ಕಳೆದ ಒಂದು ವಾರದಿಂದ ಹಾನಗಲ್ ತಾಲೂಕಿನ ಹಲವು ಗ್ರಾಮಗಳಲ್ಲಿ ಆನೆಗಳ ಹಾವಳಿ ನಿರಂತರವಾಗಿ ನಡೆಯುತ್ತಲೇ ಇದೆ.
ರೈತರ ಬೆಳೆ ನಾಶ ಮಾಡುತ್ತಿರುವ ಈ ನಾಲ್ಕು ಆನೆಗಳ ಹಿಂದಿನಿಂದ ಹಾನಗಲ್ ತಾಲೂಕಿನ ರೈತರು ಆತಂಕದಲ್ಲಿದ್ದಾರೆ.
ತಾಲೂಕಿನ ಗೊಂದಿ ಗ್ರಾಮದ ರವೀಂದ್ರಗೌಡ ಪಾಟೀಲ್ ಎಂಬುವರ ಜಮೀನಿಗೆ ಆನೆ ದಾಳಿ ಮಾಡಿ ಕಟಾವಿಗೆ ಬಂದ ಲಕ್ಷಾಂತರ ಮೌಲ್ಯದ ಭತ್ತ, ಕಬ್ಬು ಬೆಳೆಯನ್ನು ನಾಶ ಮಾಡಿವೆ.
ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಬಂದ ಈ ನಾಲ್ಕು ಆನೆಗಳ ಹಿಂಡನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಕಳೆದ ಎರಡು ದಿನಗಳ ಹಿಂದೆ ಕೂಡ ಇದೇ ರೀತಿ ಆನೆಗಳ ಹಿಂಡು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಬೆಳೆಗಳನ್ನು ಹಾನಿ ಮಾಡಿದ್ದವು.