ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಪರಿಷತ್ತಿನ ಕಲಾಪವು ಇಂದು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸುತ್ತಿದ್ದ ವೇಳೆ, ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ದೇಶದ್ರೋಹಿ’ ಎಂದು ಕರೆದಿದ್ದು ಭಾರಿ ಸಂಚಲನ ಮೂಡಿಸಿದೆ.
ಸಿಎಂ ಭಾಷಣದ ಮಧ್ಯೆ ನಜೀರ್ ಅಹ್ಮದ್ ನೀಡಿದ ಈ ವಿವಾದಾತ್ಮಕ ಹೇಳಿಕೆ ಬಿಜೆಪಿ ಸದಸ್ಯರನ್ನು ಕೆರಳಿಸಿತು. ತಕ್ಷಣವೇ ಸಭಾಪತಿಗಳ ಪೀಠದ ಮುಂದಿನ ಆವರಣಕ್ಕೆ ನುಗ್ಗಿದ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು. ನಜೀರ್ ಅಹ್ಮದ್ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದರು. ಮಾತಿನ ಚಕಮಕಿ ಜೋರಾಗಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಕಲಾಪವನ್ನು ನಾಳೆ (ಫೆ. 03) ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.
ವಿವಾದದ ಬೆನ್ನಲ್ಲೇ ಮಾಧ್ಯಮಗಳ ಕಣ್ಣಿಗೆ ಬಿದ್ದ ನಜೀರ್ ಅಹ್ಮದ್, “ಸದನದಲ್ಲಿ ಅಂಥದ್ದೇನೂ ಮಾತನಾಡಿಲ್ಲ, ಎಲ್ಲವನ್ನೂ ಹೊರಗೆ ಹೇಳಲಾಗದು” ಎಂದು ಉತ್ತರ ನೀಡಿ ಜಾರಿಕೊಂಡರು. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ತೆರಳಿದರು.



