ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುರೈ ಪಾಂಡಿಕೋವಿಲ್ ನ ಅಮ್ಮಾ ಮೈದಾನದಲ್ಲಿ ನಡೆಯುತ್ತಿರುವ ಮುರುಗನ್ ಮಾನಾಡು ಭಕ್ತರ ಭಕ್ತಿ ಹಾಗೂ ರಾಜಕೀಯ ಮಾತುಗಳಿಂದ ಭರ್ಜರಿಯಾಗಿ ಸದ್ದು ಮಾಡಿದೆ. ಈ ಭಕ್ತಿ ಸಮಾರಂಭದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರು “ಕಂದ ಷಷ್ಠಿ ಕವಚಂ” ಪಠನೆ ಮಾಡಿದ್ದು, ಇದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ತಮಿಳುನಾಡು ಬಿಜೆಪಿ ಅಧ್ಯಕ್ಷ ನಯಿನಾರ್ ನಾಗೇಂದ್ರನ್, ಮಾಜಿ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವು ಪ್ರಮುಖ ರಾಜಕೀಯ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ, ಮುರುಗನ್ ಭಕ್ತಿಗೆ ರಾಜಕೀಯ ಸ್ಪರ್ಶ ನೀಡಿ, ವಿವಿಧ ಧಾರ್ಮಿಕ ಹಾಗೂ ರಾಜಕೀಯ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. “ನಮ್ಮ ಮಕ್ಕಳು ಶಾಲೆಗೆ ಪವಿತ್ರ ನೀರು ತೆಗೆದುಕೊಂಡು ಹೋಗಬೇಕು, ಕುತ್ತಿಗೆಗೆ ರುದ್ರಾಕ್ಷಿ ಧರಿಸಲು ಅವಕಾಶ ಇರಬೇಕು,” ಎಂದರು.
ಹಿಂದು ಮತಾಂತರ ವಿಷಯವನ್ನು ಉಲ್ಲೇಖಿಸುತ್ತಾ, ಜಗತ್ತಿನಲ್ಲಿ ಹಿಂದುಗಳ ಸಂಖ್ಯೆ ದಿನೇ ದಿನೇ ಇಳಿಯುತ್ತಿದೆ. ಮತಾಂತರಕ್ಕೆ ಕಡಿವಾಣ ಹಾಕಬೇಕು. ಹಿಂದು ಧರ್ಮ ತ್ಯಜಿಸಿದವರು ಮತ್ತೆ ಹಿಂದು ಧರ್ಮಕ್ಕೆ ಮರಳಬೇಕು ಎಂದು ಹೇಳಿದರು. ಜೊತೆಗೆ ತಮಿಳುನಾಡಿನಲ್ಲಿ 44,000 ದೇವಾಲಯಗಳು ಹಿಂದು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿವೆ ಎಂಬ ಅಂಕಿ-ಅಂಶ ಪ್ರಸ್ತಾಪಿಸಿ, ದೇವಾಲಯಗಳ ರಕ್ಷಣೆಯ ಅಗತ್ಯವನ್ನು ಒತ್ತಿಹೇಳಿದರು.