ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಬಿಜೆಪಿ ಮಾಜಿ ಸಚಿವ ಮಹೇಂದ್ರ ಸಿಂಗ್ ಅವರು ಹಾಕಿದ್ದ ಮಾನನಷ್ಟ ಮೊಕದ್ದಮೆ ಕೇಸ್ನಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ಗೆ ಉತ್ತರ ಪ್ರದೇಶದ ಕೋರ್ಟ್ ದೋಷಿ ಎಂದು ಹೇಳಿದೆ .
ಅದರೊಂದಿಗೆ ಶಿಕ್ಷೆ ರೂಪದಲ್ಲಿ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಬೇಷರತ್ ಆಗಿ ಕ್ಷಮೆ ಕೇಳುವಂತೆ ಸೂಚನೆ ನೀಡಿದೆ.
ಜೊತೆಗೆ ಮಹೇಂದ್ರ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಎಲ್ಲಾ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಿಂದ ಡಿಲೀಟ್ ಮಾಡುವಂತೆ ಅವರಿಗೆ ತಿಳಿಸಿದೆ. ಅದಲ್ಲದೆ, ಆಧಾರರಹಿತ ಆರೋಪಗಳನ್ನು ಮಾಡುವುದು, ಸಂಜಯ್ ಸಿಂಗ್ ಅವರ ಅಭ್ಯಾಸವಾಗಿರುವಂತೆ ತೋರುತ್ತಿದೆ ಎಂದೂ ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಮಾಜಿ ಜಲಶಕ್ತಿ ಸಚಿವರಾಗಿದ್ದ ಮಹೇಂದ್ರ ಸಿಂಗ್ 2021ರ ಅಕ್ಟೋಬರ್ನಲ್ಲಿ ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದ ಸಂಜಯ್ ಸಿಂಗ್ ವಿರುದ್ಧ 21 ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಮ್ಮ ವಿರುದ್ಧ ಅವರು ಸಂಪೂರ್ಣವಾಗಿ ಸುಳ್ಳಾಗಿರುವ ಆರೋಪ ಮಾಡಿದ್ದಾರೆ ಎಂದು ದೂರಿದ್ದರು. 2021ರ ಆಗಸ್ಟ್ 8 ರಂದು ರಾಜ್ಯ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಜಯ್ ಸಿಂಗ್ ಅವರು ಮಹೇಂದ್ರ ಸಿಂಗ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು.
ಈ ಕುರಿತಾಗಿ ಲಕ್ನೋದ ಸಿವಿಲ್ ನ್ಯಾಯಾಧೀಶರಾದ (ಹಿರಿಯ ವಿಭಾಗ) ಶ್ರದ್ಧಾ ಭಾರ್ತಿ ಅವರು ಸಂಜಯ್ ಸಿಂಗ್ ಅವರಿಗೆ ನವೆಂಬರ್ 25 ರೊಳಗೆ ಉತ್ತರವನ್ನು ಸಲ್ಲಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದರು. ಪ್ರಕರಣದ ವಿಚಾರದಲ್ಲಿ ಎರಡು ವರ್ಷಕ್ಕೂ ಅಧಿಕ ಕಾಲ ವಿಚಾರಣೆ ನಡೆಸಿದ ಕೋರ್ಟ್, ಮಂಗಳವಾರ ತೀರ್ಪು ನೀಡಿದೆ.