Monday, September 22, 2025

ದಸರಾ ಮಹೋತ್ಸವಕ್ಕೆ ಕ್ಷಣಗಣನೆ: ಸಾಂಸ್ಕೃತಿಕ ನಗರಿಯಲ್ಲಿ ಸಕಲ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಅರಂಭವಾಗಿದೆ.

ಅಂತರರಾಷ್ಟ್ರೀಯ ‘ಬುಕರ್‌’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್‌ ಸೋಮವಾರದಿಂದ ಅ.2ರವರೆಗೆ ನಡೆಯುವ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 10.10ರಿಂದ 10.40ರೊಳಗೆ ನಾಡದೇವತೆ ಚಾಮುಂಡೇಶ್ವರಿ ದೇವಿಯ ‘ಅಗ್ರಪೂಜೆ’ಯೊಂದಿಗೆ ಉತ್ಸವ ಗರಿಗೆದರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉ‍ಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಇನ್ನೂ ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್‌ ಅವರು ಖಾಸಗಿ ಹೋಟೆಲಿನಲ್ಲಿ ವಾಸ್ತವ್ಯ ಹೊಂದಿದ್ದು ಸರ್ಕಾರ ಬಿಗಿ ಭದ್ರತೆ ನೀಡಿದೆ. ಸ್ಥಳದಲ್ಲಿ 3 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿದ್ದು, ಬೆಳಗ್ಗೆ 9:30ಕ್ಕೆ ಹೋಟೆಲಿನಿಂದ ಬಾನು ಮುಷ್ತಾಕ್‌ ಪೊಲೀಸ್‌ ಎಸ್ಕಾರ್ಟ್‌ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ. ಉದ್ಘಾಟಕರ ಸ್ವಾಗತಕ್ಕೆ ಚಾಮುಂಡಿ ಬೆಟ್ಟ ಸಿದ್ಧವಾಗಿದ್ದು ಮಹಿಷಾಸುರ ಮೂರ್ತಿಯಿಂದ ದೇವಾಲಯದವರೆಗೆ ಸಾಂಪ್ರಾದಾಯಿಕ ಸ್ವಾಗತ ನೀಡಲಾಗುತ್ತದೆ. ರಸ್ತೆ ಉದ್ದಕ್ಕೂ ರಂಗೋಲಿ ಬಿಡಿಸಿ, ಬಾಳೆ ಕಂಬ ಕಟ್ಟಿ ಸ್ವಾಗತಿಸಲು ತಯಾರಿ ನಡೆದಿದೆ.

ಬಾನು ಮುಷ್ತಾಕ್‌ ಆಯ್ಕೆ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರಿಂದ ಭಾರೀ ಭದ್ರತೆ ನೀಡಲಾಗಿದೆ.

ಇದನ್ನೂ ಓದಿ