ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಟ್ಟದಲ್ಲಿ ಕೋವಿಡ್ ರೂಪಾಂತರಿ ಮತ್ತೆ ಹೆಡೆಯೆತ್ತಿರುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಕೊರೋನಾ ಚಿಕಿತ್ಸೆಗಾಗಿಯೇ ಮೀಸಲಾದ ವೈದ್ಯಕೀಯ ಸೌಲಭ್ಯಗಳು ಬಳಕೆಗೆ ಸನ್ನದ್ಧವಾಗಿರುವುದನ್ನು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಡಿ.27 ರಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಾಲೀಮು ಹಮ್ಮಿಕೊಳ್ಳಲಾಗಿದೆ.
ಅದರಲ್ಲೂ, ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳು, ವೆಂಟಿಲೇಟರ್ಗಳು, ಸಾಗಣೆ ವ್ಯವಸ್ಥೆ, ಮಾನವ ಸಂಪನ್ಮೂಲಗಳ ಸನ್ನದ್ಧತೆ ಬಗ್ಗೆ ಈ ತಾಲೀಮು ಸಂದರ್ಭದಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ.
ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ವರ್ಚುವಲ್ ವಿಧಾನದ ಮೂಲಕ ನಡೆದ ಸಭೆಯಲ್ಲಿ ಕೇಂದ್ರ ಆರೊಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಈ ತಾಲೀಮು ಕುರಿತು ಸಲಹೆಗಳನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ತಿಳಿಸಲಾಗಿರುವ ಕಣ್ಗಾವಲು ಕಾರ್ಯತಂತ್ರದ ಅನ್ವಯ, ಸಂಭಾವ್ಯ ಪರಿಸ್ಥಿತಿ ಬಗ್ಗೆ ಕಣ್ಗಾವಲನ್ನು ಬಲಗೊಳಿಸಬೇಕು. ಕೋವಿಡ್ ಪತ್ತೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು, ಕೊರೋನಾ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯುವಂತೆ ಜನರನ್ನು ಉತ್ತೇಜಿಸಬೇಕು ಎಂಬುದು ಸೇರಿದಂತೆ ಹಲವಾರು ಸಲಹೆಗಳನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ವರದಿಯಾಗಿದೆ.