ಈ ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಮುಖ್ಯಮಂತ್ರಿಗೆ, ಡಿಸಿಎಂಗೆ, ನನ್ನ ಆಪ್ತ ಸುರೇಶ್‌ಗೆ ಅರ್ಪಿಸುತ್ತೇನೆ: ಸಿಪಿ ಯೋಗೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ನನ್ನ ಗೆಲುವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ನನ್ನ ಆಪ್ತ ಸುರೇಶ್‌ಗೆ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸಂತಸ ವ್ಯಕ್ತಪಡಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ 25,515 ಮತಗಳ ಅಂತರದಿಂದ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನಾನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ನಿರೀಕ್ಷೆ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮಾಹಿತಿ ಕೊಟ್ಟಿದ್ದೆ. ನನ್ನ ನಿರೀಕ್ಷೆಗೆ ಹತ್ತಿರವಾದ ಗೆಲುವು. ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಮುಖ್ಯಮಂತ್ರಿಗೆ, ಉಪಮುಖ್ಯಮಂತ್ರಿಗೆ ಮತ್ತು ನನ್ನ ಜೊತೆ ಇದ್ದ ಸುರೇಶ್‌ಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಜೆಡಿಎಸ್ ಅಂತಿಮ ದಿನಗಳನ್ನ ಎಣಿಸುತ್ತಿದೆ ಎಂದು ಹೇಳಲು ಬಯಸುತ್ತೇನೆ. ದೇವೇಗೌಡರು ಹೋರಾಟದಲ್ಲಿ ಸಾಮಾಜಿಕ ಕಳಕಳಿ ಇರಲಿಲ್ಲ. ಕೇವಲ ಸ್ವಾರ್ಥ ಇತ್ತು. ಕುಟುಂಬದವರನ್ನ ಬೆಳೆಸುವ ಹೋರಾಟ ಇತ್ತು. ಒಕ್ಕಲಿಗರ ನಾಯಕತ್ವವನ್ನ ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ. ಅವರ ಹಠ, ಛಲ ನೋಡಿ ನಾನು ಆಲೋಚನೆ ಮಾಡಿದ್ದೆ ಆದರೆ ಅದಕ್ಕೆ ಜನ ಸೊಪ್ಪು ಹಾಕಲಿಲ್ಲ. ನಿಖಿಲ್ ಇನ್ನೂ ಯುವಕ. ಆತನಿಗೆ ಒಳ್ಳೆದಾಗಲಿ. ನಿಖಿಲ್ 36 ವರ್ಷದ ಯುವಕ 63 ವರ್ಷದವರ ಥರ ಮಾತನಾಡುತ್ತೇನೆ. ದೇವೇಗೌಡರು ತಮ್ಮ ಸಂಧ್ಯಕಾಲದಲ್ಲಿ ಮೊಮ್ಮಗನ ಪರ ಪ್ರಚಾರ ಮಾಡಿದ್ದರೂ ಕೂಡ ಏನು ಆಗಲಿಲ್ಲ. ಇನ್ನು ಮುಂದೆಯೂ ಆರಾಮಾಗಿ ಇರಲ್ಲ. 100ಕ್ಕೆ 100 ಭಾಗ ಒಕ್ಕಲಿಗರ ಒಲವನ್ನ ದೇವೇಗೌಡರ ಕುಟುಂಬ ಕಳೆದಕೊಳ್ಳುತ್ತಿದೆ ಎಂದು ಹೇಳಿದರು.

ವಿಜಯೇಂದ್ರ ಅವರು ನನ್ನ ಬ್ಯಾಟರಿ ವೀಕ್ ಆಗಿದೆ ಎಂದು ಹೇಳಿದ್ದರು ಆದರೆ ಅವರ ಬ್ಯಾಟರಿ ವೀಕ್ ಆದಾಗ ನಾನು ಚಾರ್ಜ್ ಮಾಡಿದ್ದೆ. ವಿಜಯೇಂದ್ರ, ಯಡಿಯೂರಪ್ಪ ಷಡ್ಯಂತ್ರದಿಂದ ನಾನು ಎನ್‌ಡಿಎ ಬಿಟ್ಟೆ. ಇವತ್ತು ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ನಾಯಕತ್ವವನ್ನು ನಮ್ಮ ಜನ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿಗೆ ಅಧಿಕಾರ ದಾಹವಿದೆ. ಹಾಗಾಗಿ ಯಾರನ್ನು ಸಹಿಸಲ್ಲ, ಅಪ್ಪನ್ನು ಸಹಿಸಲ್ಲ, ಮಗನನ್ನು ಸಹಿಸಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ನಿಖಿಲ್ ಅವರನ್ನು ನಿಲ್ಲಿಸಿದ್ದರೆ ಈ ಬಾರಿ ಗೆಲ್ಲುತ್ತಿದ್ದರೇನೋ? ರಾಜೀನಾಮೆ ಕೊಟ್ಟು ಮಂಡ್ಯಕ್ಕೆ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!