ಬರಿದಾದ ನದಿಗಳಿಂದ ಹೊಲ ಗದ್ದೆಗಳಿಗೆ ನುಗ್ಗಿದ ಮೊಸಳೆಗಳು, ಜನರಲ್ಲಿ ಹೆಚ್ಚಿದ ಆತಂಕ

ಚಂದ್ರಶೇಖರ ಎಸ್ ಚಿನಕೇಕರ

ಚಿಕ್ಕೋಡಿ: ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳು ಮಳೆ ಇಲ್ಲದೇ ಬರಿದಾಗುತ್ತಿರುವ ಹಿನ್ನೆಲೆ ಮೊಸಳೆಗಳು ಆಹಾರ ಅರಸಿಕೊಂಡು ಹೊಲ ಗದ್ದೆಗಳಿಗೆ ಬರುತ್ತಿರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ.

ನದಿಯಲ್ಲಿ ಮೊಸಳೆಗಳಿಗೆ ಆಹಾರ ಸಿಗುತ್ತಿಲ್ಲ. ಹೀಗಾಗಿ ನದಿ ತೀರದ ಜನವಸತಿ ಪ್ರದೇಶಗಳಿಗೆ ನುಗ್ಗಿ, ಮೇಕೆ, ದನ ಕರು, ಕುರಿಗಳನ್ನು ಹೊತ್ತೊಯ್ಯುತ್ತಿವೆ. ಮೊಸಳೆಗಳು ದಾಂಗುಡಿ ಇಡುತ್ತಿರುವುದಿಂದ ನದಿ ತೀರದ ಜನ ಜೀವ ಕೈಯಲ್ಲಿ ಹಿಡಿದಿದ್ದಾರೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಮೊಸಳೆಗಳು ವಾಸವಾಗಿರಬಹುದು ಎಂದು ಹೇಳಲಾಗುತ್ತಿದೆ.

ಅದರಲ್ಲೂ ಅಥಣಿ ತಾಲೂಕಿನ ಸವದಿ ದರ್ಗಾ, ನಂದಗಂವ, ಜನವಾಡ, ಸತ್ತಿ, ಕಾಗವಾಡ ತಾಲೂಕಿನ ಮೊಳವಾಡ, ಉಗಾರ ಖುರ್ದ, ಕೃಷ್ಣಾ ಕಿತ್ತೂರ, ರಾಯಬಾಗ ತಾಲೂಕಿನ ಕುಡಚಿ, ಬಾವನ ಸವದತ್ತಿ, ನಸಲಾಪೂರ, ಚಿಕ್ಕೋಡಿ ತಾಲೂಕಿನ ಇಂಗಳಿ, ಮಲಿಕವಾಡ, ಕಲ್ಲೋಳ, ಸದಲಗಾ, ನಿಪ್ಪಾಣಿ ತಾಲೂಕಿನ ಸಿದ್ದಾಳ, ಜತ್ರಾಟ, ಕಾರದಗಾ ಮುಂತಾದ ಕಡೆಗೆ ಮೊಸಳೆಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ.

ಏಪ್ರಿಲ್, ಮೇ ತಿಂಗಳಲ್ಲಿಯೇ ಅರಣ್ಯ ಇಲಾಖೆಯು ಜನವಸತಿ ಪ್ರದೇಶಕ್ಕೆ ನುಗ್ಗಿ ಹಾವಳಿ ಮಾಡಿದ  ಮೊಸಳೆಗಳನ್ನು ಸ್ಥಳೀಯರ ಸಹಾಯದಿಂದ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅಥಣಿ ತಾಲೂಕಿನ ಸವದಿ ದರ್ಗಾ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿಯಿಂದ ಜನವಸತಿ ಪ್ರದೇಶಕ್ಕೆ ನುಗ್ಗಿ ಮೇಕೆ ಮರಿಯೊಂದನ್ನು ಹಿಡಿದಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಸ್ಥಳೀಯ ಯುವಕರು ಮೊಸಳೆಯನ್ನು ಸೆರೆ ಹಿಡಿದು ಅಥಣಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದು, ಅವರು ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ನಲುಗಿದ ಜನತೆ

ಯಾವಾಗ ನದಿಯಲ್ಲಿ ನೀರು ಕಡಿಮೆಯಾಗುತ್ತ ಬರುತ್ತೋ ಆಗ ಮೊಸಳೆ ಕಾಟ ನದಿ ತೀರದಲ್ಲಿ ಹೆಚ್ಚುತ್ತಾ ಹೋಗುತ್ತದೆ. ನದಿಯ ಇಕ್ಕೆಲಗಳಲ್ಲಿ ಕಬ್ಬಿನ ಗದ್ದೆ, ನದಿ ತಿರುವು ಪ್ರದೇಶ, ಬ್ಯಾರೇಜ್, ಬಿದಿರಿನ ಮೊದೆ ಇದ್ದರಲ್ಲಿ ಮೊಸಳೆಗಳು ಹೆಚ್ಚಾಗಿ ಕಾಣ ಸಿಗುತ್ತವೆ. ಹೀಗಾಗಿ ಇಂತಹ ಪ್ರದೇಶ ಇರುವ ನದಿ ತೀರದಲ್ಲಿ ಹಸು, ಎಮ್ಮೆ, ಕರುಗಳನ್ನು ಮೇಯಲು ಬಿಡಲು ಜನ ಹೆದರುವಂತಾಗಿದೆ. ಅದರಲ್ಲೂ ಕುರಿ ಮರಿ, ಮೇಕೆ ಮರಿಯನ್ನು ಸದ್ದಿಲ್ಲದೆ ಮೊಸಳೆಗಳು ಹೊತ್ತೊಯ್ತುತ್ತಲೇ ಇವೆ.

ಮೊಸಳೆ ಸೆರೆ ಹಿಡಿಯಲು ಸ್ಥಳೀಯರಿಗೆ ತರಬೇತಿ

ನದಿಯಲ್ಲಿ ನೀರಿಲ್ಲದೇ ಆಹಾರ ಅರಸಿಕೊಂಡು ಹೊಲ ಗದ್ದೆ, ಜನವಸತಿ ಪ್ರದೇಶಕ್ಕೆ ಮೊಸಳೆ ನುಗ್ಗುವುದು ಹೆಚ್ಚಾಗಿದ್ದು, ಕಳೆದ ಎರಡು ತಿಂಗಳಲ್ಲಿಯೇ ಚಿಕ್ಕೋಡಿ ಉಪ ವಿಭಾಗವೊಂದರಲ್ಲಿಯೇ ಜನವಸತಿ ಪ್ರದೇಶಕ್ಕೆ ನುಗ್ಗಿದ ಐದು ಮೊಸಳೆಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಮಳೆ ಆಗದೇ ಹೋದಲ್ಲಿ ಮೊಸಳೆ ಕಾಟ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, ಮೊಸಳೆ ಸೆರೆ ಹಿಡಿಯುವ ತರಬೇತಿಯನ್ನು ಸ್ಥಳೀಯರಿಗೆ ನೀಡುವ ಮೂಲಕ ಜನರಿಂದ ಮೊಸಳೆಗಳಿಗೆ ತೊಂದರೆಯಾಗಬಾರದು. ಮೊಸಳೆಗಳಿಂದ ಜನರಿಗೆ ತೊಂದರೆಯಾಗಬಾರದು ಹಾಗೆ ಕ್ರಮ ಕೈಗೊಳ್ಳುವ ಕುರಿತು ಆಲೋಚಿಸಲಾಗುತ್ತಿದೆ ಎಂದು ಚಿಕ್ಕೋಡಿ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!