ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ: 20ಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳಿಕೊಂಡು ಗಾಳ ಹಾಕುತ್ತಿದ್ದ ಸವಿತಾ ಎನ್ನುವ ಮಹಿಳೆಯನ್ನು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಕಿಟ್ಟಿ ಪಾರ್ಟಿಯಲ್ಲಿ ನೆಪದಲ್ಲಿ ಶ್ರೀಮಂತ ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದ ಸವಿತಾ, ಈವರೆಗೆ 20ಕ್ಕೂ ಹೆಚ್ಚು ಮಹಿಳೆಯರಿಗೆ ಬರೋಬ್ಬರಿ 30 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ್ದಾಳೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.

ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ, ಸಚಿವರ ಹೆಸರೇಳಿ ಗಾಳ ಹಾಕುತ್ತಿದ್ದಳು. ಬಳಿಕ ಅವರನ್ನು ಪುಸಲಾಯಿಸಿ ಹೂಡಿಕೆ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದಳು.

ಅಮೆರಿಕದಿಂದ (USA) ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ವಂಚಿಸಿದ್ದಾಳೆ. ಈ ಸಂಬಂಧ ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನವಾಗಿ ಬಳಿಕ ಜಾಮೀನಿನ ಮೇಲೆ ಆಚೆ ಬಂದಿದ್ದಳು. ಬಳಿಕ ಸವಿತಾ ಮತ್ತದೇ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದು, ಇದೀಗ ಬಸವೇಶ್ವರ ನಗರ ಪೊಲೀಸರ ಅತಿಥಿಯಾಗಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!