ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ದರ್ಶನ್ & ಗ್ಯಾಂಗ್ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ವಿಚಾರ ಸದ್ದು ಮಾಡಿದೆ.
ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನನ್ನ ಬಳಿ ಸುಳಿಯಬೇಡಿ ಎಂದು ಸಿಎಂ ಸಿದ್ಧರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ ಎನ್ನಲಾಗಿದೆ.
ಇದಕ್ಕಿಂತ ಕ್ರೂರ ಕೃತ್ಯ ಮತ್ತೊಂದಿಲ್ಲ. ಯಾರೂ ಈ ವಿಚಾರದಲ್ಲಿ ನನ್ನ ಹತ್ತಿರ ಬರುವ ಕೆಲಸ ಮಾಡಬೇಡಿ. ಯಾರೂ ಒತ್ತಡ ಹಾಕೋದಾಗಲೀ, ಮನವಿ ಮಾಡೋದಕ್ಕಾಗಲೀ ಬರಬೇಡಿ. ಈ ಘಟನೆ ಎಂಥದ್ದು ಅಂತ ನಾನು ನೋಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಆ ಮೂಲಕ ದರ್ಶನ್ ಪರ ಲಾಬಿ ಮಾಡಲು ಮುಂದಾದ ಕೆಲ ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ವಾರ್ನಿಂಗ್ ಕೊಟ್ಟಿದ್ದಾರೆ.
ಪೊಲೀಸರು ತಮಗೆ ತೋರಿಸಿದ ದೃಶ್ಯಾವಳಿಯನ್ನೂ ಕೂಡ ಸಿಎಂ ಸಿದ್ಧರಾಮಯ್ಯ ಪ್ರಸ್ತಾಪ ಮಾಡಿದ್ದು, ಅದರಂತಹ ಕ್ರೂರತನ ನಾನು ನೋಡೇ ಇಲ್ಲ ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು ದೃಶ್ಯಗಳನ್ನು ತೋರಿಸಿದ ಬಳಿಕವೇ ಸಿಎಂ ಪ್ರಕರಣದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕೆಲಸ ಮಾಡಲು ಸೂಚನೆ ನೀಡಿದ್ದರು.
ಇನ್ನು ಪ್ರಕರಣದ ಕುರಿತು ಯಾರೂ ಹೆಚ್ಚಿಗೆ ಮಾತನಾಡುವ ಅಗತ್ಯವಿಲ್ಲ. ಅನಗತ್ಯವಾಗಿ ಮಾತಿಗೆ ಸಿಕ್ಕಬೇಡಿ. ಪರ – ವಿರೋಧ ಯಾವ ಚರ್ಚೆ ಕೂಡ ಬೇಡ. ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಸಂಪುಟ ಸಭೆಯ ಆರಂಭದಲ್ಲೇ ಸಚಿವರಿಗೆ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.