ಹೊಸದಿಗಂತ ವರದಿ ದಾವಣಗೆರೆ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬೆಳಿಗ್ಗೆಯಿಂದ ಸುಗಮ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 12 ರ ವೇಳೆಗೆ ಶೇ.25 ರಷ್ಟು ಹಕ್ಕು ಚಲಾವಣೆಯಾಗಿದೆ
ಬೆಳಿಗ್ಗೆಯಿಂದ ನೀರಸವಾಗಿ ಆರಂಭಗೊಂಡ ಮತದಾನ ಬಿಸಿಲು ಹೆಚ್ಚಿದಂತೆ ಸ್ವಲ್ಪ ಚುರುಕು ಪಡೆಯಿತು. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹಕ್ಕು ಚಲಾವಣೆಗೆ ಮತದಾರರು ಹೆಚ್ಚು ಉತ್ಸಾಹ ತೋರುತ್ತಿರುವುದು ಕಂಡು ಬರುತ್ತಿದೆ.
ಕ್ಷೇತ್ರದಲ್ಲಿ ಒಟ್ಟಾರೆ 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 10 ವಿಶೇಷ ಮತಗಟ್ಟೆಗಳಾಗಿವೆ. ಆರಂಭದಲ್ಲಿ ಕನಗೊಂಡನಹಳ್ಳಿಯ ಮತಗಟ್ಟೆ ಸಂಖ್ಯೆ 66 ರ ಮತಯಂತ್ರದಲ್ಲಿ ಅಣಕು ಮತದಾನದ ವೇಳೆ ದೋಷ ಕಂಡುಬಂದ ಪರಿಣಾಮ ಮತಯಂತ್ರ ಬದಲಿಸಲಾಯಿಸಿ ಸಾಮಾನ್ಯ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಎಲ್ಲ 284ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದ್ದು, 76 ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಅರೆ ಮಿಲಿಟರಿ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:
ಬೇಸಿಗೆಯ ಬಿಸಿಲು ಹೆಚ್ಚಿರುವುದರಿಂದ ಮತದಾರರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. “ಪ್ರತಿ ಮತಗಟ್ಟೆಗಳಲ್ಲಿ ಶಾಮಿಯಾನ ಹಾಕಲಾಗಿದ್ದು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಸೌಲಭ್ಯವನ್ನೂ ಒದಗಿಸಲಾಗಿದೆ. ವಯೋವೃದ್ಧರು ಮತ್ತು ದಿವ್ಯಾಂಗ ಚೇತನರಿಗೆ ನೆರವಾಗಲು ಎನ್ಎಸ್ಎಸ್ ಸ್ವಯಂಸೇವಕರು ಹಾಗೂ ವೀಲ್ ಚೇರ್ ಸೌಲಭ್ಯವನ್ನು ನಿಯೋಜಿಸಲಾಗಿದೆ,.
ಕ್ಛೆತ್ರ ವ್ಯಾಪ್ತಿಯ ಹದಡಿ, ಕುಕ್ಕವಾಡ, ಕೈದಾಳೆ ಸೇರಿದಂತೆ ವಿವಿಧ ಗ್ರಾಮೀಣ ಭಾಗದ ಮತಗಟ್ಟೆಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಿತ್ತೆ ವಿಠ್ಠಲ ಮಾಧವರಾವ್ ಭೇಟಿ ನೀಡಿ ಪರಿಶೀಲಿಸಿದರು.



