ಹೊಸ ದಿಗಂತ ಡಿಜಿಟಲ್ ಡೆಸ್ಕ್
ಭಾರತದ ಎಂಟು ನಿವೃತ್ತ ಸೇನಾಧಿಕಾರಿಗಳಿಗೆ ಬೇಹುಗಾರಿಕೆ ಆರೋಪದ ಮೇಲೆ ಈ ಹಿಂದೆ ಮರಣದಂಡನೆ ವಿಧಿಸಿದ್ದ ಕತಾರ್ ನ್ಯಾಯಾಲಯವು ಗುರುವಾರ ಆ ಶಿಕ್ಷೆಯನ್ನು ಜೈಲುಸಜೆಗೆ ಪರಿವರ್ತಿಸಿ ಮರುತೀರ್ಪು ಪ್ರಕಟಿಸಿದೆ.
ಈ ಮೂಲಕ ಭಾರತದ ಮರುಪರಿಶೀಲನಾ ದಾವೆಗೆ ಮನ್ನಣೆ ಸಿಕ್ಕಿರುವುದು ಸ್ಪಷ್ಟವಾಗಿದೆ. ಪರಿವರ್ತನೆಗೊಳಗಾದ ಜೈಲುಶಿಕ್ಷೆ ಯಾವ ಸ್ವರೂಪದ್ದೆಂಬ ಬಗ್ಗೆ ವಿವರಗಳು ಲಭ್ಯವಿಲ್ಲ. ಪೂರ್ಣ ತೀರ್ಪು ಕೈಗೆ ಸಿಕ್ಕ ನಂತರವಷ್ಟೇ ಈ ಬಗ್ಗೆ ವಿವರ ನೀಡುವುದಾಗಿ ಭಾರತದ ವಿದೇಶ ಸಚಿವಾಲಯ ಹೇಳಿದೆ.
ಕತಾರ್ ತೀರ್ಪಿನ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶ ಸಚಿವಾಲಯವು, “ಮರಣದಂಡನೆ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸುವ ಮತ್ತು ಆರೋಪಿತರಾದವರಿಗೆ ದೂತಾವಾಸದ ಮುಖಾಂತರ ಕಾನೂನು ನೆರವು ನೀಡುವ ಪ್ರಕ್ರಿಯೆಯಲ್ಲಿ ಮೊದಲ ದಿನದಿಂದಲೇ ತೊಡಗಿಸಿಕೊಂಡಿದ್ದೆವು. ಆರೋಪಿತರ ಕುಟುಂಬದ ಜತೆಗೂ ಸಮಾಲೋಚನೆಗಳನ್ನು ನಡೆಸಲಾಗಿತ್ತು. ಇನ್ನು ಮುಂದೆ ಸಹ ಎಲ್ಲ ಬಗೆಯ ಕಾನೂನು ಪ್ರಯತ್ನಗಳು ಮುಂದುವರಿಯುತ್ತವೆ. ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ವ್ಯಾಖ್ಯಾನಗಳನ್ನು ಮಾಡುವುದಿಲ್ಲ” ಎಂದು ಹೇಳಿದೆ.
ಖಾಸಗಿ ಕಂಪನಿಯೊಂದರ ಜತೆ ಕೆಲಸ ಮಾಡುತ್ತಿದ್ದ ಭಾರತದ ಈ ಎಂಟು ನಿವೃತ್ತ ನೌಕಾಸೇನೆ ಅಧಿಕಾರಿಗಳು ಇಸ್ರೇಲಿಯರ ಜತೆಗೂಡಿ ಕತಾರಿನ ಜಲಾಂತರ್ಗಾಮಿ ಯೋಜನೆಯೊಂದರ ಬಗ್ಗೆ ಬೇಹುಗಾರಿಕೆ ಮಾಡುತ್ತಿದ್ದರೆಂಬ ಆರೋಪದ ಮೇಲೆ 2022ರಲ್ಲಿ ಕತಾರ್ ಅವರನ್ನು ಬಂಧಿಸಿತ್ತು.