ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರವಾಗದೇ ಹಿನ್ನಡೆಯಾಗುತ್ತಿದ್ದಂತೆ, ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಬೆಳವಣಿಗೆಯನ್ನು ತಮಿಳುನಾಡಿನ ಪರವಾಗಿ ಕಂಡಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಇದನ್ನು “ರಾಜ್ಯದ ಗೆಲುವು” ಎಂದು ಘೋಷಿಸಿದ್ದಾರೆ.
X ನಲ್ಲಿ ಪೋಸ್ಟ್ ಮಾಡಿದ ಸ್ಟಾಲಿನ್, “ತಮಿಳುನಾಡು ದೆಹಲಿಯನ್ನು ಸೋಲಿಸಿದೆ” ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯನ್ನೂ ಹಾಗೂ ಎಐಎಡಿಎಂಕೆಯನ್ನೂ ಎದುರಿಸುವ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 23ರಂದು ನಡೆಯುವ ರಾಜಕೀಯ ಪೈಪೋಟಿಯಲ್ಲಿಯೂ ಜನರು ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮಸೂದೆ ವಿರುದ್ಧ ತಮಿಳುನಾಡಿನ ಡಿಎಂಕೆ ಸಂಸದರು ಸೇರಿದಂತೆ ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ ಮತ್ತು ತೆಲಂಗಾಣದ ಬಿಜೆಪಿ ವಿರೋಧಿ ನಾಯಕರು ಒಟ್ಟಾಗಿ ಮತ ಚಲಾಯಿಸಿದ ಪರಿಣಾಮ, ಮಸೂದೆ ಅಂಗೀಕಾರವಾಗಲಿಲ್ಲ.
ಇದನ್ನೂ ಓದಿ:
ಮತ್ತೊಂದು ಪ್ರತಿಕ್ರಿಯೆಯಲ್ಲಿ, ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಾನು ವಿರೋಧಿಯಲ್ಲ, ಆದರೆ ಅದನ್ನು ಕ್ಷೇತ್ರ ಮರುವಿಂಗಡಣೆ ಜೊತೆ ಕೊಂಡೊಯ್ಯುವುದು ಸರಿಯಲ್ಲ ಎಂದು ಸ್ಟಾಲಿನ್ ಅಭಿಪ್ರಾಯಪಟ್ಟರು. ವಿಶೇಷವಾಗಿ ದಕ್ಷಿಣ ರಾಜ್ಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಡಿಲಿಮಿಟೇಶನ್ ವಿಷಯದಲ್ಲಿ ಸೂಕ್ಷ್ಮವಾಗಿ ಚಿಂತನೆ ಅಗತ್ಯವಿದೆ ಎಂದು ಹೇಳಿದರು.
ಮಸೂದೆಯನ್ನು ಪ್ರತ್ಯೇಕವಾಗಿ ಜಾರಿಗೆ ತರಬಹುದಾಗಿದ್ದರೂ, ಎನ್ಡಿಎ ಸರ್ಕಾರ ಅದನ್ನು ಮಾಡಲಿಲ್ಲ ಎಂದು ಟೀಕಿಸಿದ ಅವರು, ಇದು ನ್ಯಾಯಯುತ ಕ್ರಮವಲ್ಲ ಎಂದು ಹೇಳಿದರು. “ಮಹಿಳೆಯರು ಕೇವಲ ಮತ ಬ್ಯಾಂಕ್ ಅಲ್ಲ, ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ” ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.



