ಗಗನಸಖಿ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಗೋಪಾಲ್ ನಿರ್ದೋಷಿ ಎಂದ ದೆಹಲಿ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2012ರಲ್ಲಿ ನಡೆದಿದ್ದ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ ನಿರ್ದೋಷಿ ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.

ಗೀತಿಕಾ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಗೋಪಾಲ್ ಕಂಡಾ ಮೇಲಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಕಾಸ್ ಧುಲ್‌ ಅವರು ಗೋಪಾಲ್ ಕಂಡಾ ಹಾಗೂ ಮತ್ತೊಬ್ಬ ಆರೋಪಿ ಅರುಣಾ ಛಡ್ಡಾ ಅವರನ್ನು ನಿರ್ದೋಷಿ ಎಂದು ಘೋಷಿಸಿದ್ದಾರೆ.

ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಈ ಆತ್ಮಹತ್ಯೆ ಪ್ರಕರಣದಲ್ಲಿ ಕಂಡಾ ಹಾಗೂ ಛಡ್ಡಾ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು, ಬೆದರಿಕೆ, ಸಾಕ್ಷಿ ನಾಶ, ಪಿತೂರಿ ಹಾಗೂ ಇನ್ನಿತರ ಆರೋಪಗಳಿದ್ದವು. ಇದರೊಂದಿಗೆ ಅತ್ಯಾಚಾರ ಹಾಗೂ ಅಸ್ವಾಭಾವಿಕ ಲೈಂಗಿಕಕ್ರಿಯೆ ನಡೆಸಿದ ಆರೋಪವೂ ಸೇರಿತ್ತು. ಆದರೆ ನ್ಯಾಯಾಲಯವು ಈ ಎರಡನ್ನು ವಿಚಾರಣೆಯಿಂದ ಕೈಬಿಟ್ಟಿತು.

ಗೀತಿಕಾ ಶರ್ಮಾ ಅವರು ಕಂಡಾ ಅವರು ನಡೆಸುತ್ತಿದ್ದ ಎಂಎಲ್‌ಡಿಆರ್‌ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. 2012ರಲ್ಲಿ ದೆಹಲಿ ವಾಯವ್ಯ ಭಾಗದಲ್ಲಿರುವ ಅಶೋಕ ವಿಹಾರದಲ್ಲಿರುವ ಮನೆಯಲ್ಲಿ ಗೀತಿಕಾ ಅವರ ಮೃತದೇಹ ಪತ್ತೆಯಾಗಿತ್ತು. ಗೀತಿಕಾ ಅವರು ಬರೆದಿಟ್ಟಿದ್ದರು ಎನ್ನಲಾದ ಮರಣ ಪತ್ರದಲ್ಲಿ ಕಂಡಾ ಹಾಗೂ ಛಡ್ಡಾ ಅವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಬರೆದಿದ್ದರು.

ಗೃಹ ಇಲಾಖೆ ರಾಜ್ಯ ಸಚಿವರಾಗಿದ್ದ ಕಂಡಾ ಅವರು ಈ ಪ್ರಕರಣದ ನಂತರ ರಾಜೀನಾಮೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!