ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಗೆದ್ದ ನಂತರ ಅವರ ಬೆಂಬಲಿಗರು ದೇಶ ದ್ರೋಹಿ ಹೇಳಿಕೆ ನೀಡಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ ಪರಮೇಶ್ವರ್ ಅವರ ರಾಜೀನಾಮೆಗೆ ಪಟ್ಟುಹಿಡಿದರು.
ಸದನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಅವರು ವಿಧಾನಸೌಧದಲ್ಲೇ ದೇಶದ್ರೋಹಿ ಹೇಳಿಕೆ ನೀಡಿರುವವರ ವಿರುದ್ಧ ಸರ್ಕಾರ ಇನ್ನೂ ಕ್ರಮ ಜರುಗಿಸಿಲ್ಲ. ಅಂತಹ ವಿರೋಧಿ ಹೇಳಿಕೆಗಳಹ ಬಂದಾಗ ಸ್ಥಳದಲ್ಲಿಯೇ ಖಂಡಿಸಬೇಕಾಗಿತ್ತು ಆದರೆ ಆ ಕೆಲಸ ಮಾಡದೆ. ಪ್ರಶ್ನೆ ಮಾಡಿದ ವರದಿಗಾರನನ್ನು ನಿಂದಿಸಿದ್ದಾರೆ ಸರ್ಕಾರಕ್ಕೆ ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದರು.
ಯಾರು ಪಾಕಿಸ್ತಾನದ ಪರ ಜೈಕಾರ ಕೂಗಿದ್ದಾರೆ ಅವರೇ ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲೆ ಬಾಂಬ್ ಹಾಕಬಹುದು ಹಾಗಾಗಿ ಕೂಡಲೇ ಕ್ರಮ ಜರುಗಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಬಳಿಕ ಕಾನೂನು ಸಚಿವ ಎಚ್.ಕೆ ಪಾಟೀಲ್ ಮಾತನಾಡಿ, ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಸಹಜವಾಗಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಪರ ಘೋಷಣೆ ಕೂಗುತ್ತಾರೆ. ಅದರಲ್ಲಿ ಯಾರೋ ಒಬ್ಬ ಪಾಕಿಸ್ತಾನ ಜಿಂದಾಬಾದ್ ಎಂದಿರುವ ಬಗ್ಗೆ ಸುಳ್ಳು ಸೃಷ್ಟಿ ಮಾಡಿದ್ದಾರೆ. ನಾನು ಧೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇನೆ ಅಂತಹ ದೇಶದ್ರೋಹಿ ಹೇಳಿಕೆ ಕೂಗಿರುವ ಬಗ್ಗೆ ಕೇಳಿಸಿಕೊಂಡಿಲ್ಲ ಎಂದ ಅವರು ಈಗಾಗಲೇ ದೂರು ದಾಖಲಾಗಿದೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಡುವ ಗದ್ದಲ ಕೋಲಾಹಲವಾದ ಹಿನ್ನೆಲೆಯಲ್ಲಿ ಸಭಾಪತಿಗಳು 10ನಿಮಿಷಗಳಕಾಲ ಸದನವನ್ನು ಮುಂದೂಡಿದರು.
ಸದನ ಮುಂದೂಡುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಭಾರತ್ ಮಾತಾಕಿ ಜೈ ಹಾಗೂ ದೇಶ ದ್ರೋಹಿ ಕಾಂಗ್ರೆಸ್’ಗೆ ದಿಕ್ಕಾರ ಕೂಗಿದರು.