ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಡಾಖ್ಗೆ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಬುಧವಾರ ನಡೆದ ಬೃಹತ್ ಪ್ರತಿಭಟನೆ ಮತ್ತು ಬಂದ್ ಹಿಂಸಾಚಾರಕ್ಕೆ ತಿರುಗಿದ್ದು, ಲೇಹ್ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದರು.
ಲಡಾಖ್ಗೆ ರಾಜ್ಯದ ಸ್ಥಾನಮಾನದ ಕುರಿತು ಕೇಂದ್ರದೊಂದಿಗೆ ಪ್ರಸ್ತಾವಿತ ಮಾತುಕತೆ ಮುಂದುವರಿಸಬೇಕೆಂಬ ಬೇಡಿಕೆಯನ್ನು ಬೆಂಬಲಿಸಿ ಈ ಪ್ರತಿಭಟನೆ ನಡೆಸಲಾಯಿತು.ನಂತರ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಹಾರಿಸಿ ಲಾಠಿ ಪ್ರಹಾರ ನಡೆಸಿದರು.
ಲೇಹ್ ಅಪೆಕ್ಸ್ ಬಾಡಿ(LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್(KDA) ಸದಸ್ಯರನ್ನು ಒಳಗೊಂಡ ಕೇಂದ್ರ ಮತ್ತು ಲಡಾಖ್ ಪ್ರತಿನಿಧಿಗಳ ನಡುವೆ ಅಕ್ಟೋಬರ್ 6 ರಂದು ಹೊಸ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.
ರಾಜ್ಯದ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗೆ ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಇಂದು ಬೆಳಗ್ಗೆ ಲೇಹ್ನ ಬೀದಿಗಿಳಿದಿದ್ದರು. ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ತಮ್ಮ ರಾಜ್ಯದ ಸ್ಥಾನಮಾನ ಬೇಡಿಕೆಯನ್ನು ಮುಂದಿಟ್ಟು ಇಂದು ಸಂಪೂರ್ಣ ಲಡಾಖ್ ಬಂದ್ಗೆ ಕರೆ ನೀಡಿದ್ದರು.