ಹೊಸ ದಿಗಂತ ವರದಿ,ಮೈಸೂರು
ಮೈಸೂರು ನಗರದಲ್ಲಿರುವ ಎಲ್ಲಾ ಅಂಗಡಿ, ಮುಂಗಟ್ಟು, ವ್ಯಾಪಾರ ಮಳಿಗೆಗಳು, ಮಾಲ್ ಗಳು, ಖಾಸಗಿ ಕಚೇರಿಗಳು, ಶಾಲಾ-ಕಾಲೇಜ್ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಕನ್ನಡವನ್ನು ಶೇ 60 ಭಾಗ ಪ್ರಧಾನವಾಗಿ ಕಡ್ಡಾಯವಾಗಿರಬೇಕೆಂದು ನಗರ ಪಾಲಿಕೆ ಕಟ್ಟುನಿಟ್ಟಾಗಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಬರೆದಿದ್ದ ಭಿತ್ತಿ ಪತ್ರಗಳನ್ನು ಹಿಡಿದಕೊಂಡು ಕೆಲಕಾಲ ಧರಣಿ ನಡೆಸಿದರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ – ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ. ಕನ್ನಡ ನಾಡಿನಲ್ಲಿ ಮೊದಲು ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಬೇಕು ಹಾಗೂ ಕನ್ನಡದಲ್ಲಿ ವ್ಯವಹರಿಸಬೇಕು. ಕನ್ನಡ ಭಾಷೆ ಕಲಿಯಬೇಕು. ಇಲ್ಲದಿದ್ದರೆ ನಾವು ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲಾ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಸಬೇಕು ಎನ್ನುವುದು ಹೊಸ ಕಾನೂನು ಅಲ್ಲ, ಆದರೂ ಈ ಸಂಬAಧವಾಗಿ ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಕರವೇ ನಾಮಫಲಕ ಮಹಾ ಅಭಿಯಾನವನ್ನು ಕೈಗೊಂಡಿತ್ತು. ಅದರ ಹೋರಾಟದ ಮೇರೆಗೆ ರಾಜ್ಯ ಸರ್ಕಾರ ಈಗ ನಾಮಫಲಕಗಳಲ್ಲಿ ಶೇ 60 ಕಡ್ಡಾಯ ಸುಗ್ರೀವಾಜ್ಞೆ ಹೊರಡಿಸಿದೆ.
ಇತ್ತೀಚೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ” ಶಿವಮೊಗ್ಗ ನಗರದ ಎಲ್ಲಾ ಅಂಗಡಿ, ಉದ್ದಿಮೆ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಶೇ. 60 ಭಾಗ ಕನ್ನಡ ಭಾಷೆ ಪ್ರಧಾನವಾಗಿ ಬಳಸಬೇಕು. ಈ ನಿಯಮ ಉಲ್ಲಂಘಿಸಿದರೆ ಉದ್ದಿಮೆಗಳ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಆದೇಶ ಹೊರಡಿಸಿದ್ದಾರೆ. ಈ ಮಾದರಿಯಲ್ಲಿಯೇ ಮೈಸೂರು ನಗರ ಪಾಲಿಕೆ ಈ ಕೂಡಲೇ ಅಧಿಕಾರಿಗಳ ತುರ್ತು ಸಭೆ ಕರೆದು, ಎಲ್ಲಾ ಅಂಗಡಿ, ಮಳಿಗೆ, ಮಾಲ್, ಶಾಲಾ ಕಾಲೇಜು, ಜಾಹಿರಾತು ಫಲಕಗಳಲ್ಲಿ ಕನ್ನಡ ಶೇ. 60 ಭಾಗ ಪ್ರಧಾನವಾಗಿ, ಕಡ್ಡಾಯವಾಗಿರಬೇಕೆಂದು, ಕನ್ನಡ ನಾಮಪಲಕ ಹಾಕದೇ ಇರುವವರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಂಡು ಸರ್ಕಾರದ ಸುಗ್ರೀವಾಜ್ಞೆಯ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು.
ಕನ್ನಡ ಬಳಸದ ಮಳಿಗೆಗಳಿಗೆ ನೋಟಿಸ್ ನೀಡಿ, ಒಂದು ತಿಂಗಳ ಕಾಲಾವಕಾಶ ನೀಡಿ, ನಂತರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕೆಲಸ ನೀವು ಮಾಡದಿದ್ದರೆ, ಮತ್ತೆ ನಮ್ಮ ಸಂಘಟನೆ ಬೀದಿಗಿಳಿದು ಕನ್ನಡ ಬಳಸದ ನಾಮಪಲಕಗಳಿಗೆ ಮಸಿ ಬಳಿಯಲಾಗುವುದೆಂದು ಮೈಸೂರು ನಗರ ಪಾಲಿಕೆಗೆ ಎಚ್ಚರಿಕೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಕೃಷ್ಣಯ್ಯ ಸಿ ಎಚ್, ಗೋಲ್ಡ್ ಸುರೇಶ್, ಡಾ. ಶಾಂತರಾಜೇಅರಸ್, ಪ್ರಭುಶಂಕರ್ ಪ್ರಜೀಶ್ ಪಿ, ಸುನಿಲ್ ಅಗರ್ವಾಲ್, ಶಿವಲಿಂಗಯ್ಯ, ರವಿ ಒಲಂಪಿಯ, ಹನುಮಂತಯ್ಯ, ಶಿವನಾಯಕ್, ಅಂಬಾಅರಸ್, ಲಕ್ಷಿ÷್ಮ, ಭಾಗ್ಯಮ್ಮ, ನೇಹಾ, ಮಂಜುಳಾ, ಪದ್ಮ, ಶುಭಶ್ರೀ ,ಗೀತಾ ಗೌಡ, ಪುಷ್ಪವತಿ, ಸಮಯ ಮಂಜುಳಾ, ಜ್ಯೋತಿ, ಇಂದಿರಾ, ಎಳನೀರು ರಾಮಣ್ಣ, ದರ್ಶನ್ ಗೌಡ, ರಾಧಾಕೃಷ್ಣ, ಆನಂದ, ಮಹದೇವ ಸ್ವಾಮಿ, ರವೀಶ್, ಪ್ರಭಾಕರ, ರಮೇಶ್, ಕುಮಾರ್ ಇನ್ನೂ ಮುಂತಾದವರು ಭಾಗವಹಿಸಿದ್ದರು.