ಜೂನ್ 8,9 ರಂದು ಶಿವಮೊಗ್ಗದಲ್ಲಿ ದೇಸೀ ಬೀಜೋತ್ಸವ

ಹೊಸದಿಗಂತ ವರದಿ,ಶಿವಮೊಗ್ಗ :

ಸಹಜ ಸಮೃದ್ಧ ಸಂಸ್ಥೆ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ನಾನಗಳ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಜೂನ್ 8 ಮತ್ತು 9 ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ದೇಸೀ ಬೀಜೋತ್ಸವ ನಡೆಸಲಾಗುವುದು ಎಂದು ಸಂಸ್ಥೆಯ ಬಿ.ಎಂ.ಮಲ್ಲಿಕಾರ್ಜುನ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇಂದು ಸ್ಥಳೀಯ ದೇಸೀ ತಳಿಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಹೈಬ್ರಿಡ್ ಬೀಜಗಳು ಬಂದ ಮೇಲೆ ಅನಿವಾರ್ಯವಾಗಿ ಕೀಟನಾಶಕ, ರಾಸಾಯನಿಕ ಕ್ರಿಮಿ ನಾಶಕಗಳನ್ನು ಬಳಸಬೇಕಾಗಿದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳು, ಸಾವಯವ ಕೃಷಿಕರು ಸೇರಿಕೊಂಡು ದೇಸಿ ಬೀಜ ಸಂಗ್ರಹಕ್ಕೆ ಆದ್ಯತೆ ನೀಡಿವೆ. ನಮ್ಮ ರೈತರಿಗೆ ಮತ್ತು ತೋಟಗಾರಿಕೆ ಬೆಳೆಗಾರರಿಗೆ ಇದನ್ನು ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಬೀಜ ಮೇಳವನ್ನು ಆಯೋಜಿಸಿದ್ದೇವೆ ಎಂದರು.

ನಿವೃತ್ತ ಪ್ರೊಫೆಸರ್ ಡಾ.ಎ.ವಿ.ಪ್ರದೀಪ್ ಮಾತನಾಡಿ, ಜೂ.8 ಮತ್ತು 09 ರಂದು ಎರಡು ದಿನಗಳ ಕಾಲ ದೇಸಿ ಬೀಜೋತ್ಸವ ನಡೆಯಲಿದೆ. ಜೂನ್ 08 ರಂದು ಬೆಳಿಗ್ಗೆ 11.30 ಕ್ಕೆ ಉದ್ಘಾಟನಾ ಸಮಾರಂಭ ಇದ್ದು, ಬಸವಕೇಂದ್ರದ ಶ್ರೀ ಮರುಳಸಿದ್ದ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಉಪಕುಲಪತಿ ಡಾ. ಜಗದೀಶ್ ಆರ್.ಸಿ., ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್, ನವುಲೆ ಸಾವಯವ ಸಂಶೋಧನ ಕೇಂದ್ರದ ಸಂಯೋಜಕ ಡಾ. ಎಸ್.ಪ್ರದೀಪ್, ತುಮಕೂರು ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ, ದಾವಣಗೆರೆ ಐಕಾಂತಿಕ ಸಂಸ್ಥೆಯ ರಾಘವ, ಸಾವಯವ ಕೃಷಿಕರಾದ ಶಂಕರ ಎಂ.ದೇವೇಂದ್ರಪ್ಪ, ನಂದೀಶ್ ಉಪಸ್ಥಿತರಿರುವರು ಎಂದರು.

ಮೇಳದಲ್ಲಿ ಸುಮಾರು 15ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ತಾವೇ ಬೆಳೆದ ದೇಸಿ ಬೀಜಗಳನ್ನು ಪ್ರದರ್ಶನ ಮಾಡುತ್ತಾರೆ. ಜೊತೆಗೆ ಮಾರಾಟ ಕೂಡ ಮಾಡುತ್ತಾರೆ. ಭತ್ತ, ತರಕಾರಿ, ಸಿರಿ ಧಾನ್ಯ ಬೀಜಗಳು, ಹಣ್ಣುಗಳ ಬೀಜಗಳು ಇಲ್ಲಿ ದೊರೆಯುತ್ತವೆ, ಜೊತೆಗೆ ಆಹಾರ ಮಳಿಗೆಗಳೂ ಇರಲಿವೆ. ಎಲ್ಲವೂ ದೇಸಿತನದಲ್ಲಿ ಇರುತ್ತವೆ ಎಂದರು.

ಪ್ರಮುಖರಾದ ಕುಮಾರ ನಾಯ್ಡು, ದಿನೇಶ್ ಹೊಸನಗರ, ಸಂತೋಷ್ ಕೊರಗಿ ಮುಂತಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!