ಹೊಸದಿಗಂತ ಡಿಜಿಟಲ್ ಡೆಸ್ಕ್:
ತರಗತಿ ಅಂದಮೇಲೆ ಒಂದೇ ರೀತಿಯ ಮಕ್ಕಳಿರೋಕೆ ಸಾಧ್ಯವಾ? ಒಬ್ಬರಿಗೆ ಗಣಿತ ಕಷ್ಟವಾದ್ರೆ, ಇನ್ನೊಬ್ಬರಿಗೆ ಸೈನ್ಸ್ ಕಷ್ಟ ಎನಿಸಬಹುದು, ಕೆಲವರಿಗೆ ಕನ್ನಡ ಕಷ್ಟವಾದ್ರೆ ಹಲವರಿಗೆ ಇಂಗ್ಲಿಷ್ ಕಷ್ಟ ಎನಿಸಬಹುದು. ಆದರೆ ಮಕ್ಕಳಿಗೆ ಯಾವುದು ಕಷ್ಟವೋ ಅದನ್ನು ಸರಳಗೊಳಿಸಿ ಮಕ್ಕಳಿಗೆ ಕಲಿಸಿಕೊಡುವುದು ಶಿಕ್ಷಕರ ಕೆಲಸ.
ಆದರೆ ಮೇಘಾಲಯದಲ್ಲಿ ಶಿಕ್ಷಕರೊಬ್ಬರು ಇಂಗ್ಲಿಷ್ ಓದೋಕೆ ಬಾರದ ವಿದ್ಯಾರ್ಥಿಗೆ ಚಪ್ಪಲಿಯ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಸುತ್ತಮುತ್ತ ಇದ್ದ ಕೊಳಕು ಚಪ್ಪಲಿಯ ಹಾರ ಮಾಡಿ ವಿದ್ಯಾರ್ಥಿಗೆ ಹಾಕಿ ಶಾಲೆಯ ಸುತ್ತಮುತ್ತ ಮೆರವಣಿಗೆ ಮಾಡಿದ್ದಾರೆ.
ಮನೆಗೆ ಬಂದು ವಿದ್ಯಾರ್ಥಿ ಶಾಲೆಗೆ ಹೋಗಲು ನಿರಾಕರಿಸಿದ್ದಾನೆ. ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಕಠಿಣ ಶಿಕ್ಷೆ ನೀಡಿ ಎಂದು ಒತ್ತಾಯಿಸಿದ್ದಾರೆ. ಮಕ್ಕಳಿಗೆ ಬೈದು ಬುದ್ದಿ ಹೇಳಲಿ ಆದರೆ ಈ ರೀತಿ ಅವಮಾನ ಮಾಡಿದರೆ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ, ಇದು ಮಾನಸಿಕ ಬೆಳವಣಿಗೆಗೆ ಪೂರಕವಲ್ಲ ಎಂದು ಪೋಷಕರು ಹೇಳಿದ್ದಾರೆ.
ಮೇಘಾಲಯದ ಶಿಕ್ಷಣ ಸಚಿವರು ಈ ಬಗ್ಗೆ ವರದಿ ನೀಡುವಂತೆ ಶಾಲೆಗೆ ಹೇಳಿದ್ದು, ವರದಿ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.