Friday, December 12, 2025

ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟರೆ ಅಡುಗೆ ಸಲಕರಣೆ ಹಿಡಿದು ಸಿದ್ದರಾಗಿ: ಮಹಿಳೆಯರಿಗೆ ದೀದಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿದ್ದು, ಇದರ ವಿರುದ್ಧ ರಾಜಕೀಯ ನಾಯಕರು ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.

ಇದೀಗ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ವೇಳೆ ಮಹಿಳೆಯರ ಹೆಸರು ಕೈಬಿಟ್ಟಿದ್ದರೆ ಎಲ್ಲ ತಾಯಂದಿರು, ಸೋದರಿಯರು ಅಡುಗೆ ಉಪಕರಣಗಳನ್ನು ಹಿಡಿದುಕೊಂಡು ಸಿದ್ಧರಾಗಿರುವಂತೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕರೆ ನೀಡಿದ್ದಾರೆ.

ಬಂಗಾಳದ ಕೃಷ್ಣನಗರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಮೂಲಕ ತಾಯಂದಿರು ಮತ್ತು ಸಹೋದರಿಯರ ಹಕ್ಕುಗಳನ್ನು ಕಸಿದುಕೊಳ್ಳುತ್ತೀರಾ ಎಂದು ಪ್ರಶ್ನಿಸಿರುವ ಅವರು, ಚುನಾವಣೆಯ ಸಮಯದಲ್ಲಿ ದೆಹಲಿಯಿಂದ ಪೊಲೀಸರನ್ನು ಕರೆತಂದು ಮಹಿಳೆಯರನ್ನು ಬೆದರಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟರೆ ಯಾವ ಉಪಕರಣ ನಿಮ್ಮ ಬಳಿ ಇದೆಯೋ ಅದನ್ನು ಹಿಡಿದು ಸಿದ್ದರಾಗಿ. ಮಹಿಳೆಯರು ಎದುರು ನಿಂತು ಹೋರಾಡಿದರೆ ಪುರುಷರು ಅವರ ಹಿಂದೆ ಇರುತ್ತಾರೆ ಎಂದು ಅವರು ಹೇಳಿದರು.

ಬಿಜೆಪಿಯು ಮಹಿಳೆಯರು ಎಷ್ಟು ಶಕ್ತಿಶಾಲಿಯಾಗಿದ್ದರೆ ಎಂದು ನೋಡಲು ಬಯಸುತ್ತಿದ್ದಾರೆ. ಕೋಮುವಾದದಲ್ಲಿ ನನಗೆ ನಂಬಿಕೆ ಇಲ್ಲ. ಜಾತ್ಯತೀತತೆಯನ್ನು ನಂಬುತ್ತೇನೆ. ಚುನಾವಣೆ ಬಂದಾಗ ಬಿಜೆಪಿಯು ಹಣ, ಇತರ ರಾಜ್ಯಗಳಿಂದ ಜನರನ್ನು ಕರೆತಂದು ಇಲ್ಲಿನ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೋಲ್ಕತ್ತಾದಲ್ಲಿ ಇತ್ತೀಚೆಗೆ ಆಯೋಜಿಸಲಾದ ಸಾಮೂಹಿಕ ಭಗವದ್ಗೀತೆ ಪಠಣದ ಕುರಿತು ಮಾತನಾಡಿದ ಅವರು, ನಾವೆಲ್ಲರೂ ನಮಗೆ ಬೇಕಾದಾಗ ಮನೆಯಲ್ಲಿ ಗೀತೆಯನ್ನು ಪಠಿಸುತ್ತೇವೆ. ಇದಕ್ಕಾಗಿ ಸಾರ್ವಜನಿಕ ಸಭೆಯನ್ನು ಯಾಕೆ ಆಯೋಜಿಸಬೇಕು ಎಂದ ಅವರು ಗೀತೆಯ ಬಗ್ಗೆ ಕೂಗುತ್ತಿರುವವರು ಶ್ರೀಕೃಷ್ಣ ಏನು ಹೇಳಿದ್ದಾನೆ ಎಂದು ಹೇಳಲಿ. ಧರ್ಮ ಎಂದರೆ ಶಾಂತಿ, ಶುದ್ಧತೆ, ಮಾನವೀಯತೆಯಾಗಿದೆ. ಹಿಂಸೆ, ತಾರತಮ್ಯ ಮತ್ತು ವಿಭಜನೆಯಲ್ಲ ಎಂದರು.

ನಮ್ಮ ಮೇಲೆ ದಾಳಿ ಮಾಡಿದರೆ ನಮಗೆ ಹೇಗೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಗೊತ್ತಿದೆ. ಬಂಗಾಳದಿಂದ ಜನರನ್ನು ಹೊರಹಾಕಲು ತಮ್ಮ ಸರಕಾರ ಯಾರಿಗೂ ಬಿಡುವುದಿಲ್ಲ. ಯಾರೂ ಕೂಡ ಗಡಿ ಪ್ರದೇಶಗಳಲ್ಲಿ ಇರುವ ಬಿಎಸ್‌ಎಫ್ ಪೋಸ್ಟ್‌ಗಳ ಬಳಿ ಹೋಗಬೇಡಿ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

error: Content is protected !!