ಹೊಸದಿಗಂತ ವರದಿ ಬೆಂಗಳೂರು:
ಸ್ವ-ಉದ್ಯೋಗಕ್ಕೆ ಒತ್ತು ಕೊಡುವ ಸಲುವಾಗಿ, ರಾಷ್ಟ್ರೋತ್ಥಾನದ ಸೇವಾ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಯಿತು.
ಕೆಂಪೇಗೌಡನಗರದ ಕೇಶವಶಿಲ್ಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ಸ್ಲಂಗಳ ಸಮಗ್ರ ಅಭಿವೃದ್ದಿಗಾಗಿ ಸಕ್ರಿಯವಾಗಿರುವ 12 ಸೇವಾ ವಸತಿಗಳಲ್ಲಿ 3 ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿ ನೀಡಿ, ಈ ದಿನ 62 ಹೊಲಿಗೆ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಯಿತು.
270 ಮಂದಿ ಸ್ವ-ಉದ್ಯೋಗ : 11 ಸೇವಾ ವಸತಿಗಳಲ್ಲಿ ಹೊಲಿಗೆ ತರಬೇತಿಯೊಂದಿಗೆ ಕಂಪ್ಯೂಟರ್ ಹಾಗೂ ಬ್ಯೂಟೀಷಿಯನ್ ತರಬೇತಿಯನ್ನೂ ನೀಡಲಾಗುತ್ತಿದ್ದು, ಒಟ್ಟು 350ಕ್ಕೂ ಹೆಚ್ಚಿನ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಈವರೆಗೂ ಒಟ್ಟು 450+ ಮಂದಿ ಉಚಿತ ಹೊಲಿಗೆ ತರಬೇತಿ ಪಡೆದಿದ್ದು, 270 ಮಂದಿ ಸ್ವ-ಉದ್ಯೋಗ ಮಾಡುತ್ತಿದ್ದಾರೆ.
1995ರಲ್ಲಿ ಪ್ರಾರಂಭ: ಸೇವಾ ವಸತಿ ಯೋಜನೆಯನ್ನು ರಾಷ್ಟ್ರೋತ್ಥಾನವು ಬೆಂಗಳೂರಿನ ಸ್ಲಂಗಳ ಸಮಗ್ರ ವಿಕಾಸಕ್ಕಾಗಿ 1995ರಲ್ಲಿ ಪ್ರಾರಂಭಿಸಿತು. ಸದ್ಯ, 570 ಸ್ಲಂಗಳ ಪೈಕಿ 230 ಸ್ಲಂಗಳಲ್ಲಿ ಶಾಲಾ ನಂತರದ ಕಲಿಕಾ ಕೇಂದ್ರಗಳು, ವೃತ್ತಿಪರ ತರಬೇತಿ, ಆರೋಗ್ಯ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. 75 ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದು, 2000+ ಮಹಿಳೆಯರು ಸ್ವಸಹಾಯ ಸಂಘಗಳ ಸದಸ್ಯರಾಗಿದ್ದಾರೆ.