ಹೊಸದಿಗಂತ ವರದಿ ಹಾವೇರಿ:
ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲಿನ ಸಿಬಿಐ ಕೇಸ್ ವಾಪಸ್ ಪಡೆಯಲು ಸರ್ಕಾರಕ್ಕೆ ಅಧಿಕಾರವಿಲ್ಲ. ಅವರು ಜೈಲಿಗೆ ಹೋಗುವುದು ಖಚಿತ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಕನಕ ಜಯಂತಿ ಕಾರ್ಯಕ್ರಮದ ಅಂಗವಾಗಿ ಕಾಗಿನೆಲೆಗೆ ತೆರಳುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ಕೇಸ್ ಮುಂದುವರೆಸಲು ಅಭ್ಯಂತರ ಇಲ್ಲ ಎಂದು ಕೋರ್ಟ್ ಹೇಳಿದೆ. ಅವರ ಮೇಲೆ ಈಗ ಚಾರ್ಜ್ ಶೀಟ್ ಮಾತ್ರ ಬಾಕಿ ಇದೆ ಎಂದರು.
ಮೇಲ್ನೋಟಕ್ಕೆ ತುಂಬಾ ಸ್ಪಷ್ಟವಾಗಿ ಅಕ್ರಮ ಹಣ ಸಂಪಾದನೆ ಮಾಡಿರುವುದು ಬಹಿರಂಗ ಆಗಿದೆ. ನೂರಾರು ಕೋಟಿ ಹಣ ಸಿಕ್ಕಿರೋದು ಇಡೀ ರಾಜ್ಯದ ಜನ ನೋಡಿದ್ದಾರೆ. ಸಿಬಿಐ ತನಿಖೆ ಆಗಿದೆ, ಅವರು ಜೈಲಿಗೆ ಹೋಗೋದ್ರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು.
ಅಧಿವೇಶನದ ಸಿದ್ದತೆ ಕುರಿತು ಮಾತನಾಡಿ, ನಮಗೆ ಅಧಿವೇಶನದಲ್ಲಿ ಮಾತಾಡಲು ಹತ್ತಾರು ವಿಷಯಗಳಿವೆ. ಈ ಸರ್ಕಾರ ರಾಜ್ಯದ ಜನರ ಸಮಸ್ಯೆ ಕೇಳುತ್ತಿಲ್ಲ. ಇದು ಅಭಿವೃದ್ಧಿ ಶೂನ್ಯ ಸರ್ಕಾರ. ನಮ್ಮ ಶಾಸಕರಿದ್ದಾರೆ,
ದಿಗ್ಗಜರಿದ್ದಾರೆ ನೋಡೋಣ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಗೊಂದಲ ಬಗೆಹರಿಯೋದಕ್ಕೆ ಸಾಧ್ಯವೇ ಇಲ್ಲ. ಜಾತಿ ಜನ ಗಣತಿ ಕೇಂದ್ರ ಸರ್ಕಾರದ ಕರ್ತವ್ಯ. ಮೋದಿ ಕೂಡಾ ಜಾತಿ ಗಣತಿ ಮಾಡ್ತೀವಿ ಅಂದಿದ್ದಾರೆ. ಬಿಹಾರ್ ದಲ್ಲಿ ರಿಲೀಸ್ ಮಾಡಿದ್ದಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ರಿಪೋರ್ಟ್ ರೆಡಿ ಇದ್ರೂ ಬಿಡುಗಡೆ ಆಗಲಿಲ್ಲ ಎಂದು ದೂರಿದರು.
ವರದಿಗಾಗಿ ಲಿಂಗಾಯತರು- ಒಕ್ಕಲಿಗರು ಎದ್ದು ಕೂತಿದ್ದಾರೆ. ಕಾಂತರಾಜ್ ಅವರ ಕಾರ್ಯದರ್ಶಿ ಕೂಡಾ ಸಹಿ ಹಾಕಿಲ್ಲ. ಅದರ ಮೂಲ ಕಾಪಿನೇ ಕಳ್ಳತನ ಆಗಿದೆ. ಈ ಬಗ್ಗೆ ಜಯಪ್ರಕಾಶ್ ಹೆಗಡೆ ಜೊತೆ ನಾನೇ ಮಾತಾಡಿದ್ದೇನೆ. ಸರ್ಕಾರ ಕೇಳಿದಾಗ ಕೊಡೋಕೆ ತಯಾರಿದ್ದೇವೆ ಎಂದಿದ್ದರು. ವರದಿಗೆ ಶ್ಯಾಮನೂರು- ಡಿಕೆಶಿ ಸಹಿ ಹಾಕಿದ್ದಾರೆ. ಸಮಸ್ಯೆ ಸೃಷ್ಟಿ ಮಾಡಿದವರೇ ಸಿದ್ದರಾಮಯ್ಯ. ವರದಿ ಬಿಡುಗಡೆ ಮಾಡಿದರೆ ಅಂದೇ ಕಾಂಗ್ರೆಸ್ ಸರ್ಕಾರ ಇರಲ್ಲ. ಜೈಲಿಗೆ ಹೋಗೋದಂತೂ ಖಾತ್ರಿ , ಪಾರ್ಲಿಮೆಂಟ್ ಎಲೆಕ್ಷನ್ ಮುಂಚೇನೋ ನಂತರವೋ ತೀರ್ಮಾನ ಆಗಬೇಕಷ್ಟೆ ಎಂದು ಖಾರವಾಗಿ ಎಚ್ಚರಿಸಿದರು.