ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಉಂಟಾಗಿರುವ LPG ಮತ್ತು ಆಟೋ ಗ್ಯಾಸ್ ಕೊರತೆ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾಸ್ ಸಮಸ್ಯೆಯಿಂದ ಮನೆಮಠದಿಂದ ಹಿಡಿದು ಹೋಟೆಲ್ಗಳು, ಆಟೋ ಚಾಲಕರು ಎಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಕ್ಷಣ ಕೇಂದ್ರ ಸರ್ಕಾರವೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:
ಆಟೋ ಚಾಲಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ. ಹೋಟೆಲ್ಗಳಿಗೆ ಅಡುಗೆ ಮಾಡುವುದು ಕಷ್ಟವಾಗುತ್ತಿದೆ. ಮನೆಯವರು ಹೇಗೋ ಅಡುಗೆ ಮಾಡಿಕೊಂಡು ಸಾಗಿಸುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ರಾಜ್ಯದ ಕೈಯಲ್ಲಿ ಏನೂ ಇಲ್ಲ, ಸರಬರಾಜು ನೀತಿ ರೂಪಿಸುವುದು ಕೇಂದ್ರದ ಹೊಣೆ ಎಂದು ಹೇಳಿದರು.
ನಗರದ ಹಲವು ಭಾಗಗಳಲ್ಲಿ ಆಟೋ LPG ಬಂಕ್ಗಳ ಮುಂದೆ ಕಿಲೋಮೀಟರ್ಗಳಷ್ಟು ಉದ್ದ ಸಾಲುಗಳು ಕಂಡುಬಂದಿದ್ದು, ಕೆಲ ಬಂಕ್ಗಳಲ್ಲಿ ‘ನೋ ಸ್ಟಾಕ್’ ಫಲಕಗಳು ಹಾಕಲಾಗಿದೆ. ಆಟೋ ಚಾಲಕರು ದಿನದ ಆದಾಯ ಕಳೆದುಕೊಳ್ಳುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಇತ್ತೀಚೆಗೆ ದರ ಏರಿಕೆಯಿಂದ ಪ್ರತಿ ಲೀಟರ್ಗೆ ದರವು ₹89.52ಕ್ಕೆ ಏರಿಕೆಯಾಗಿದೆ.



