ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು ಪ್ರಾರಂಭಿಸಿದ ಆಪರೇಷನ್ ಸಿಂದೂರ ಯಶಸ್ಸಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಉದ್ರಿಕ್ತ ಭಾಷಣದ ಒಂದು ದಿನದ ನಂತರ, ಪಾಕಿಸ್ತಾನ ಸರ್ಕಾರವು “ಭಾರತದ ಪ್ರಧಾನಿಯವರ ಪ್ರಚೋದನಕಾರಿ ಹೇಳಿಕೆಗಳನ್ನು ತಿರಸ್ಕರಿಸುತ್ತದೆ” ಎಂದು ಹೇಳಿದೆ.
ಪ್ರಧಾನಿ ಮೋದಿ ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ಪ್ರಮುಖ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿದ ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ ಆಪರೇಷನ್ ಸಿಂದೂರ ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು.
ಪಾಕಿಸ್ತಾನಕ್ಕೆ ಬಲವಾದ ಎಚ್ಚರಿಕೆ ನೀಡುತ್ತಾ, ಭಾರತವು ದೇಶದ ಭಯೋತ್ಪಾದಕರು ಮತ್ತು ಮಿಲಿಟರಿ ನೆಲೆಗಳ ವಿರುದ್ಧ ಪ್ರತೀಕಾರವನ್ನು ನಿಲ್ಲಿಸಿದೆಯೇ ಹೊರತು ಅದನ್ನು ಕೊನೆಗೊಳಿಸಿಲ್ಲ ಎಂದು ಹೇಳಿದ ಮೋದಿ, ಕದನ ವಿರಾಮವನ್ನು ಮೊದಲು ಇಸ್ಲಾಮಾಬಾದ್ ಕೋರಿತ್ತು ಎಂದು ಹೇಳಿದರು.
ಮೋದಿಯವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ, “ಇತ್ತೀಚಿನ ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿದೆ, ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಪ್ರಾದೇಶಿಕ ಸ್ಥಿರತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ರಾಯಿಟರ್ಸ್ ವರದಿ ಮಾಡಿದೆ.
“ಭಾರತದ ಪ್ರಧಾನಿಯವರ ಪ್ರಚೋದನಕಾರಿ ಹೇಳಿಕೆಗಳನ್ನು ಪಾಕಿಸ್ತಾನ ತಿರಸ್ಕರಿಸುತ್ತದೆ, ಭವಿಷ್ಯದಲ್ಲಿ ಯಾವುದೇ ಆಕ್ರಮಣವನ್ನು ಸಂಪೂರ್ಣ ದೃಢಸಂಕಲ್ಪದಿಂದ ಎದುರಿಸಲಾಗುವುದು” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.