ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಉಂಟಾದ ರಾಜಕೀಯ ಚರ್ಚೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ. ಒಪ್ಪಂದದಿಂದ ದೇಶದ ರೈತರಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಒಪ್ಪಂದವನ್ನು ಚೌಕಾಶಿಯಿಂದಲ್ಲ, ಸಮತೋಲನದ ಮಾತುಕತೆಗಳ ಮೂಲಕ ರೂಪಿಸಲಾಗಿದೆ ಎಂದು ಹೇಳಿದರು. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಪ್ರಮುಖ ಕೃಷಿ ಉತ್ಪನ್ನಗಳನ್ನು ಒಪ್ಪಂದದ ವ್ಯಾಪ್ತಿಯಿಂದ ಹೊರಗಿಟ್ಟಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:
ಪ್ರತಿಪಕ್ಷ ಕಾಂಗ್ರೆಸ್ ಈ ಒಪ್ಪಂದವನ್ನು ದೇಶದ ಹಿತಾಸಕ್ತಿಗೆ ವಿರುದ್ಧ ಎಂದು ಟೀಕಿಸಿದ್ದರೂ, ಅದನ್ನು ತಳ್ಳಿ ಹಾಕಿದ ಚೌಹಾಣ್, ಇದು ರಾಷ್ಟ್ರದ ಅಭಿವೃದ್ಧಿ ಮತ್ತು ರಾಜತಾಂತ್ರಿಕ ಬಲವನ್ನು ತೋರಿಸುವ ಉದಾಹರಣೆ ಎಂದರು. ಭಾರತೀಯ ರೈತರಿಗೆ ನಷ್ಟವಾಗುವಂತಹ ಯಾವುದೇ ಅಂಶವನ್ನು ಸೇರಿಸಿಲ್ಲ ಎಂದು ಅವರು ಪುನರುಚ್ಚರಿಸಿದರು.
ಕೃಷಿ ಕ್ಷೇತ್ರದ ಭದ್ರತೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದ ಸಚಿವರು, ಹಿಂದಿನ ಸರ್ಕಾರಗಳು ರೈತರನ್ನು ಜಾಗತಿಕ ಮಾರುಕಟ್ಟೆಗೆ ಸಂಪರ್ಕಿಸಲು ವಿಫಲವಾಗಿದ್ದವು ಎಂದು ಆರೋಪಿಸಿದರು. ದೇಶದ ಆರ್ಥಿಕ ಬೆಳವಣಿಗೆಗೆ ಈ ಒಪ್ಪಂದ ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.



